ಸುದ್ದಿಬಿಂದು ಬ್ಯೂರೋ ವರದಿ
ಮೈಸೂರು : ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ‘ಗಾನಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಎಸ್. ಜಾನಕಿ ಅವರು ಶನಿವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ಭಾರತೀಯ ಚಿತ್ರರಂಗ, ವಿಶೇಷವಾಗಿ ದಕ್ಷಿಣ ಭಾರತದ ಸಂಗೀತ ಲೋಕವು ಅಪರೂಪದ ಗಾನಸಿರಿ ಕಳೆದುಕೊಂಡಂತಾಗಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಕಿ ಅವರು ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ ಅವರು ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಆರಂಭಿಸಿದ್ದರು. ಕೇವಲ ಮೂರು ವರ್ಷದ ವಯಸ್ಸಿನಲ್ಲೇ ನಾದಸ್ವರ ವಿದ್ವಾಂಸ ಶ್ರೀ ಪೈದಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಗೀತದ ಪಾಠ ಕಲಿಯಲು ಆರಂಭಿಸಿದ್ದರು.
1957ರಲ್ಲಿ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ಸಂಗೀತ ನಿರ್ದೇಶನದ ತಮಿಳು ಚಿತ್ರ ವಿಧಿಯಿನ್ ವಿಳಯಾಟ್ಟು ಮೂಲಕ ಚಿತ್ರಗಾಯನಕ್ಕೆ ಕಾಲಿಟ್ಟ ಅವರು, ಬಳಿಕ ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಭಾರತದ 20ಕ್ಕೂ ಅಧಿಕ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಪರೂಪದ ದಾಖಲೆಯನ್ನು ನಿರ್ಮಿಸಿದರು. ಭಾವಪೂರ್ಣ ಗಾಯನ, ಶುದ್ಧ ಉಚ್ಚಾರಣೆ ಹಾಗೂ ವೈವಿಧ್ಯಮಯ ಕಂಠಸಿರಿಯಿಂದ ಅವರು ಹಲವು ತಲೆಮಾರಿನ ಸಂಗೀತಪ್ರಿಯರ ಮನಗೆದ್ದಿದ್ದರು.
ಕನ್ನಡ ಚಿತ್ರರಂಗದಲ್ಲೂ ಎಸ್. ಜಾನಕಿ ಅವರ ಕೊಡುಗೆ ಅನನ್ಯವಾಗಿದೆ.’ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’, ‘ಯುಗ ಯುಗಾದಿ ಕಳೆದರೂ’, ‘ಹೇಳೆ ಗೆಳತಿ ಬಾನಲ್ಲು ನೀನೆ, ಭುವಿಯಲ್ಲು ನೀನೆ’, ‘ಬಿಸಿಲಾದರೇನು ಮಳೆಯಾದರೇನು’ ಸೇರಿದಂತೆ ನೂರಾರು ಜನಪ್ರಿಯ ಗೀತೆಗಳಿಗೆ ಅವರು ಧ್ವನಿಯಾಗಿದ್ದು, ಇಂದಿಗೂ ಆ ಹಾಡುಗಳು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ.
ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರಸಂಗೀತಕ್ಕೆ ಸೇವೆ ಸಲ್ಲಿಸಿದ ಎಸ್. ಜಾನಕಿ ಅವರು ತಮ್ಮ ವಿಶಿಷ್ಟ ಗಾಯನದ ಮೂಲಕ ಅಸಂಖ್ಯಾತ ಪ್ರಶಸ್ತಿಗಳು ಹಾಗೂ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ /ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆಯ ಶಿಖರ ಏರಿದ ಅನೀಶ್ ನಾಯ್ಕ

