ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಭಟ್ಕಳದ ವೆಂಕಟಾಪುರ ನದಿಯ ನೀರಿನಲ್ಲಿ ಮುಳುಗಿ 11 ಜನರು ಮೃತಪಟ್ಟು ಸೂತಗತ ಛಾಯೆಯಲ್ಲಿ ಬಿಜೆಪಿ ಧಾರ್ಮಿಕ ವಿಚಾರವಾಗಿ ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದು, ಆಯ್ಕೆಯಾದ ಎರಡು ವರ್ಷದಲ್ಲಿ ಒಂದಷ್ಟೂ ಅಭಿವೃದ್ಧಿ ಮಾಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿಜೆಪಿಗೆ ಇದು ಶೋಭೆಯಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ಗುಡ್ನಾಪುರ ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳದ ಮುರಿನಕಟ್ಟೆ ವಿಷಯದಲ್ಲಿ ಸಚಿವ ಮಂಕಾಳ ವೈದ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಆರೋಪಿತರ ಮೇಲೆ ಕ್ರಮ ಜರಿಗಿಸಲಾಗಿದೆ. ಸೂಕ್ತ ನ್ಯಾಯ ಒದಗಿಸದಿದ್ದಲ್ಲಿ ಬಿಜೆಪಿ ಪ್ರತಿಭಟನೆ ಮಾಡಬಹುದಿತ್ತು. ಆದರೆ ಸತ್ತರವ ಹೆಸರಲ್ಲಿ, ಕೇಸರಿ ಹೆಸರಲ್ಲಿ ಧಾರ್ಮಿಕ ವಿಷಯದಲ್ಲಿ ರಾಜಕೀಯ ಮಾಡುವುದು ಮೊದಲಿನಿಂದಲೂ ಬಿಜೆಪಿ ಮುಂದೆ ಎಂದು ಟೀಕಿಸಿದರು. ಮುರಿನಕಟ್ಟೆ ವಿಷಯದಲ್ಲಿ ನ್ಯಾಯ ಸಿಗದೇ ಇದ್ದರೆ ಪ್ರತಿಭಟನೆ ಮಾಡಿದ್ದಲ್ಲಿ ಒಪ್ಪಿಕೊಳ್ಳಬಹುದಿತ್ತು. ಆದರೆ 11ಜನರ ದುರ್ಮರಣವಾಗಿ ಸೂತಕದ ಛಾಯೆ ಇದ್ದಾಗಲೂ ರಾಜ್ಯಮಟ್ಟದ ನಾಯಕರು ಕರೆತಂದು ಪ್ರತಿಭಟನೆ ನಡೆಸಿದ್ದು, ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಮರೆತಿರುವ ಬಿಜೆಪಿಗರು ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹಿಂದಿನ ಸಂಸದ ಅನಂತಕುಮಾರ ಹೆಗಡೆ ಯಾವುದೇ ಅಭಿವೃದ್ಧಿ ಮಾಡದೇ ಇಲ್ಲ ಸಲ್ಲದ ಹೇಳಿಕೆ ನೀಡುವುದರಲ್ಲಿಯೇ ಮಗ್ನರಾಗಿರುತ್ತಿದ್ದರು. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಈಗ ಅದೇ ದಾರಿಯಲ್ಲಿ ಹೊರಟಿದ್ದಾರೆ ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಖಂಡಿಸಿದ್ದಾರೆ, ಮಂಕಾಳ ವೈದ್ಯ ಅವರ ಮೇಲೆ ಬಿಜೆಪಿ ಆರೋಪ ಹೊರಿಸುತ್ತಿದೆ ಎಂದ ಅವರು, ಮಂಕಾಳ ವೈದ್ಯ ಅವರನ್ನು ಭಟ್ಕಳದ ಬಿಜೆಪಿಯವರೇ ಭಜರಂಗಿ ಎಂದು ಕರೆದಿದ್ದಾರೆ. ಅನೇಕ ದೇವಸ್ಥಾನಗಳಿಗೆ ಅವರು ಸಹಾಯ ಮಾಡಿದ್ದಾರೆ. ಆದರೆ, ಈ ಯಾವುದೂ ಕಾಗೇರಿಯವರಿಗೆ ಕಾಣಿಸುತ್ತಿಲ್ಲ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಕಾಗೇರಿ ಶಾಸಕರಾಗಿ, ಸಚಿವರಾಗಿ, ಸಭಾಧ್ಯಕ್ಷರಾಗಿದ್ದಾಗ ಅನೇಕ ಗ್ರಾಮಗಳಲ್ಲಿ ಅವರು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳದೇ ಕುಗ್ರಾಮವನ್ನಾಗಿಸಿದ್ದಾರೆ.
ಈಗ ಭೀಮಣ್ಣ ಶಾಸಕರಾದ ಬಳಿಕ ಈ ಗ್ರಾಮಗಳು ಪ್ರಗತಿ ಕಾಣುತ್ತಿವೆ. ಗಂಗಾವಳಿಯಲ್ಲಿ ಗುಡ್ಡ ಕುಸಿತವಾದಾಗ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಘೋಷಿಸಿದ ಪರಿಹಾರ ಲಭಿಸಿಲ್ಲ. ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂದು ಆರೋಪ ಮಾಡುತ್ತ ಕಾಲಹರಣ ಮಾಡುವ ಕಾಗೇರಿಯವರು ಕ್ಷುಲ್ಲಕ ರಾಜಕಾರಣ ಬಿಡಲಿ ಎಂದು ಆಗ್ರಹಿಸಿದರು. ಭಟ್ಕಳದ ಮುರಿನಕಟ್ಟೆ ಧ್ವಂಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ನಾವೂ ಸಹ ಖಂಡಿಸಿದ್ದೇವೆ. ಸಂಸದ ಕಾಗೇರಿ ಹಾಗೂ ಬಿಜೆಪಿ ನಾಯಕರು ಶಿರಸಿ-ಹಾವೇರಿ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಭಟ್ಕಳದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಮೊದಲು ಅಭಿವೃದ್ಧಿ ಕಾರ್ಯದ ಬಗ್ಗೆ ಲಕ್ಷ್ಯವಹಿಸಿ, ರಾಜಕೀಯ ಮಾಡುವುದನ್ನು ಕೈಬಿಡಲಿ ಎಂದು ಹೇಳಿದರು.
ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣದಲ್ಲಿಯೂ ಬಿಜೆಪಿ ಪ್ರತಿಭಟನೆ ನಡೆಸಿ, ರಾಜಕೀಯ ಮಾಡಿ, ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿತ್ತು. ಸಿಬಿಐ ವರದಿ ಏನು ಬಂತು ಎಲ್ಲರಿಗೂ ತಿಳಿದಿರುವ ವಿಷಯ. ಹನಿ ಹನಿ ರಕ್ತಕ್ಕೂ ನ್ಯಾಯ ಕೊಡುತ್ತೇನೆ ಎಂದು ಮತ ಪಡೆದು ಗೆದ್ದು ಮುಂದಿನ ಚುನಾವಣೆವರೆಗೆ ನಾಪತ್ತೆಯಾಗುತ್ತಿದ್ದರು. ಹಾಲಿ ಸಂಸದರೂ ಇದೇ ದಾರಿಯನ್ನು ತುಳಿಯುತ್ತಿದ್ದಾರೆ. ಶಾಸಕರಿದ್ದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯಲ್ಲಿ ಪ್ರತಿಭಟನೆ ನಡೆಸಿ, ಇವರು ಬಸ್ಸಿನಲ್ಲಿ ಕುಳಿತು ಆರೆಸ್ಟ್ ಆದರು. ಪ್ರತಿಭಟನೆಯಲ್ಲಿ ಭಾಗಿಯಾದ ಅಮಾಯಕ ಯುವಕರು ಇನ್ನೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಅವರ ಮೇಲಿದ್ದ ಪ್ರಕರಣ ವಾಪಸ್ಸು ಪಡೆದಿಲ್ಲ.
ಈಗ ಪುನಃ ಅದೇ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ವಾಗ್ದಾಳಿ ನಡೆಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಿ 2 ವರ್ಷವಾದರೂ ಕ್ಷೇತ್ರಕ್ಕೆ ಇನ್ನೂ ಅನುದಾನ ತಂದಿಲ್ಲ. ಬಿಎಸ್ಎನ್ಎಲ್ ಟಾವರ್ ಬಿಟ್ಟರೆ ಉಳಿದೆಲ್ಲ ಅಭಿವೃದ್ಧಿ ಕಾರ್ಯ ಶೂನ್ಯ. ಈಗ ರೈಲು ತರುತ್ತೇವೆ ಎಂದು ರೈಲು ಬಿಡುತ್ತಿದ್ದಾರೆ. ; ಪ್ರಸನ್ನ ನಾಯ್ಕ, ಕಾಂಗ್ರೆಸ್ ಜಿಲ್ಲಾ ವಕ್ತಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಪ್ರಸನ್ನ ಶೆಟ್ಟಿ, ಜಗದೀಶ ಗೌಡ, ರಘು ಕಾನಡೆ, ಜ್ಯೋತಿ ಪಾಟೀಲ, ರಾಘವೇಂದ್ರ ಶೆಟ್ಟಿ ಗಿಡಮಾವಿನಕಟ್ಟೆ, ಶೈಲೇಶ ಗಾಂಧಿ ಜೋಗಳೇಕರ ಮತ್ತಿತರರು ಇದ್ದರು

