ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿ ಸಮೀಪ ತಟ್ಟಹಕ್ಕಲು ನದಿಯಲ್ಲಿ ಸಂಭವಿಸಿದ ದಾರುಣ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ರಾಜ್ಯದ ಸಚಿವ ಮಂಕಾಳ ವೈದ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಆಸ್ಪತ್ರೆಗೆ ಆಗಮಿಸಿ ಮೃತದೇಹಗಳನ್ನು ವೀಕ್ಷಿಸಿದ ಸಚಿವರು ಘಟನೆ ಕುರಿತು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಈ ಘಟನೆ ತೀರಾ ನೋವು ತಂದಿದೆ. ಇಂತಹ ದುರಂತ ನಡೆಯಬಾರದಿತ್ತು. ಒಂದು ಕ್ಷಣದ ಅಜಾಗರೂಕತೆಯಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ,” ಎಂದು ಸಚಿವ ಮಂಕಾಳ ವೈದ್ಯ ವಿಷಾದ ವ್ಯಕ್ತಪಡಿಸಿದರು. ಮೃತರ ಕುಟುಂಬದವರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. “ಪರಿಹಾರ ಎಷ್ಟು ಬೇಕಾದರೂ ಕೊಡಬಹುದು. ಆದರೆ ಹೋದ ಜೀವವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಕುಟುಂಬಗಳ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ,” ಎಂದು ಭಾವುಕರಾದರು.
ದುರಂತದಲ್ಲಿ ಮೃತಪಟ್ಟವರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತಾವು ಹೊರುತ್ತೇನೆ ಎಂದು ಘೋಷಿಸಿದ ಸಚಿವರು, ಮಕ್ಕಳ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ/ಶಿರಾಲಿ ದುರಂತ : ಸಾವಿನ ಸಂಖ್ಯೆ 11ಕ್ಕೆ ಏರಿಕೆ
ನಾಪತ್ತೆಯಾಗಿದ್ದ ಇಬ್ಬರ ಶವ ಪತ್ತೆ, ಮತ್ತೊಬ್ಬರಿಗಾಗಿ ಶೋಧ

