ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಂಕೋಲಾ ಭಾಗದಿಂದ ಬಂದು ಹಲವು ವರ್ಷಗಳಿಂದ ಮೀನು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಮೀನು ವ್ಯಾಪಾರಿಗಳ ಮೇಲೆ ನಡೆದಿರುವ ಅಮಾನವೀಯ ಕ್ರಮವನ್ನು ಯುತ್ ಕಾಂಗ್ರೇಸ್ ಮಹೇಶ ಕೃಷ್ಣ ನಾಯ್ಕ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸುಮಾರು 7 ವರ್ಷಗಳಿಂದ ಯಲ್ಲಾಪುರದಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಈ ವ್ಯಾಪಾರಿಗಳು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ಸಾಮಾನ್ಯ ಬಡ ಜನರಾಗಿದ್ದಾರೆ. ಇತ್ತೀಚೆಗೆ ಯಾವುದೇ ಮುನ್ಸೂಚನೆ, ನೋಟಿಸ್ ಅಥವಾ ಕಾನೂನುಬದ್ಧ ಕ್ರಮವಿಲ್ಲದೆ ಪಟ್ಟಣ ಪಂಚಾಯತ್ ಕಸದ ವಾಹನದಲ್ಲಿ ಬಂದ ಸಿಬ್ಬಂದಿ ಸುಮಾರು 28,000 ಮೌಲ್ಯದ ಮೀನುಗಳನ್ನು ಕಸಿದುಕೊಂಡು ಕಸ ವಿಲೇವಾರಿ ಘಟಕದಲ್ಲಿ ಎಸೆದಿರುವುದು ಅತ್ಯಂತ ಖಂಡನೀಯ ಹಾಗೂ ಮಾನವೀಯತೆ ಮರೆತ ನಡೆ ಆಗಿದೆ.
ಈ ವ್ಯಾಪಾರಿಗಳು ಯಾವುದೇ ಅಕ್ರಮ ಚಟುವಟಿಕೆ ನಡೆಸುತ್ತಿರಲಿಲ್ಲ. ಜೀವನ ಸಾಗಿಸಲು ದೂರದ ಊರಿನಿಂದ ಬಂದು ದುಡಿಮೆ ಮಾಡಿಕೊಂಡು ಬದುಕುತ್ತಿರುವ ಜನರ ಮೇಲೆ ಈ ರೀತಿಯ ದಬ್ಬಾಳಿಕೆ ನಡೆಸಿರುವುದು ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ. ಸಾಲ ಮಾಡಿ ತಂದಿದ್ದ ಮೀನುಗಳನ್ನು ಹೀಗೆ ನಾಶಪಡಿಸಿರುವುದರಿಂದ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ವ್ಯಾಪಾರದಿಂದ ಯಾವುದೇ ತೊಂದರೆ ಇದ್ದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ನೋಟಿಸ್ ನೀಡಿ, ಪರ್ಯಾಯ ವ್ಯವಸ್ಥೆ ಬಗ್ಗೆ ಸೂಚಿಸಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ನೇರವಾಗಿ ಮೀನುಗಳನ್ನು ಕಸಕ್ಕೆ ಎಸೆಯುವುದು ಅಧಿಕಾರ ದುರುಪಯೋಗದ ಉದಾಹರಣೆಯಾಗಿದೆ.
ಒಂದು ಕಡೆ ಸರ್ಕಾರ ಮೀನುಗಾರರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುವಾಗ, ಮತ್ತೊಂದು ಕಡೆ ಬಡ ಮೀನು ವ್ಯಾಪಾರಿಗಳ ಮೇಲಿನ ಇಂತಹ ಅನ್ಯಾಯ ನಡೆಯುತ್ತಿರುವುದು ವಿಷಾದನೀಯ.
ಘಟನೆಗೆ ಕಾರಣವಾಗಿರುವವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮೀನು ವ್ಯಾಪಾರಿಗಳಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಉನ್ನತಾಧಿಕಾರಿಗಳು ಹಾಗೂ ಸರ್ಕಾರದ ಮಟ್ಟಕ್ಕೆ ಈ ವಿಷಯವನ್ನು ಕೊಂಡೊಯ್ದು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು. ಎಂದು ಮಹೇಶ ನಾಯ್ಕ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

