ಕುಮಟಾ: ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಗೋಕರ್ಣ, ತದಡಿ ಸುತ್ತಮುತ್ತ ಕೈಗೊಳ್ಳಲಾಗುತ್ತಿರುವ ಕ್ರಮಗಳು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿವೆ. ಸಮುದ್ರವನ್ನು ಪ್ರವಾಸೋದ್ಯಮಕ್ಕಾಗಿ “ಮಾರಾಟ” ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಶೇಷವಾಗಿ ಮೀನುಗಾರ ಸಮುದಾಯದಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.
ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ನಿಯಮಾವಳಿ ಹಾಗೂ ಟೆಂಡರ್ ಪ್ರಕ್ರಿಯೆ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಟೆಂಡರ್ನಲ್ಲಿ ಪಾರದರ್ಶಕತೆ ಇಲ್ಲದೆ, ಕೆಲವರಿಗೆ ಮಾತ್ರ ಲಾಭವಾಗುವಂತೆ ಗೋಲಮಾಲ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. “ಒಬ್ಬರಿಗಷ್ಟೇ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಟೆಂಡರ್ ರೂಪಿಸಲಾಗಿದೆ” ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರಿಗೆ ವಿಧಿಸಲಾಗಿರುವ ನಿರ್ಬಂಧಗಳು ಪ್ರಶ್ನಾರ್ಹವಾಗಿವೆ. ದೇಶದ ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಗೆ ಕೆಲವೊಂದು ನಿಯಂತ್ರಣಗಳು ಸಹಜವಾದರೂ, ಪ್ರವಾಸೋದ್ಯಮದ ಬೋಟ್ಗಳನ್ನು ನಡೆಸಲು ಅವಕಾಶ ನೀಡಿ, ಅದೇ ವೇಳೆ ಸ್ಥಳೀಯ ಮೀನುಗಾರರಿಗೆ ನಿರ್ಬಂಧ ಹೇರಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುವತ್ತಾಗಿತ್ತು, “ಪ್ರವಾಸೋದ್ಯಮ ನಡೆಸುವವರು ದೇಶ ಕಾಯುವ ಸೈನಿಕರೇ?” ಎಂದು ಮೀನುಗಾರರು ಪ್ರಶ್ನಿಸುತ್ತಿದ್ದಾರೆ, ಇಲಾಖೆಯ ಈ ಏಕಪಕ್ಷೀಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ನಿಯಮಾವಳಿಯಿಂದ ಸಾವಿರಾರು ಮೀನುಗಾರರ ಜೀವನೋಪಾಯಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸಮುದ್ರವೇ ಅವರ ಬದುಕಿನ ಆಧಾರವಾಗಿದ್ದು, ಅದನ್ನೇ ಪ್ರವಾಸೋದ್ಯಮಕ್ಕೆ ಮೀಸಲಿಡುವುದರಿಂದ ಅವರು ಬದುಕು ನಡೆಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಈ ಕ್ರಮ ಸ್ಥಳೀಯ ಮೀನುಗಾರರ ಹಕ್ಕುಗಳಿಗೆ ಧಕ್ಕೆ ತಂದಂತಾಗಿದೆ. ತಕ್ಷಣ ಈ ನೀತಿಯನ್ನು ಮರುಪರಿಶೀಲಿಸಿ, ಮೀನುಗಾರರಿಗೆ ನ್ಯಾಯ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ/Uttara kannada/ಉತ್ತರ ಕನ್ನಡದಲ್ಲಿ ಸಿಡಿಲಿಗೆ ಮೊದಲ ಬಲಿ



