ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಆಟದಲ್ಲಿ ಸೋಲು-ಗೆಲುವು ಸಾಮಾನ್ಯವಾದದ್ದು. ಆದರೆ ಪಡ್ತಿ ಸಮಾಜದವರು ಒಗ್ಗಟ್ಟಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿರುವುದು ನಿಜವಾದ ಗೆಲುವು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ತಾಲೂಕಿನ ಪಡ್ತಿ ಸಮಾಜದ ವತಿಯಿಂದ‌ ಆಯೋಜಿಸಲಾದ ‘ಪಡ್ತಿ ಪ್ರೀಮಿಯರ್ ಲೀಗ್ (PPL) ಸೀಜನ್-3’ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ ಅವರು ಮಾತನಾಡಿದರು. ಒಂದು ತಂಡ ಗೆದ್ದಿದೆ, ಮತ್ತೊಂದು ತಂಡ ಸೋತಿದೆ ಎನ್ನುವುದಕ್ಕಿಂತ, ಪಡ್ತಿ ಸಮಾಜದವರು ಒಂದಾಗಿ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿರುವುದೇ ಮುಖ್ಯ. ಈ ಮೂಲಕ ಪಡ್ತಿ ಸಮಾಜವೇ ಗೆದ್ದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವಕರು ಕ್ರೀಡೆಯೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಹಾಗೂ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು‌ ಕರೆನೀಡಿದರು. ಪಂದ್ಯಾವಳಿಯಲ್ಲಿ ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಕಡವಾಡ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ಹಿರೇಶಿಟ್ಟಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ಚೆಂಡಿಯಾ ತಂಡ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಈ ಸಂದರ್ಭದಲ್ಲಿ ಪಂದ್ಯಾವಳಿ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ ಸೇರಿದಂತೆ ಸುಭಾಷ್ ಗುನಗಿ, ಸಂದೀಪ್ ತಳೇಕರ, ಗಿರೀಶ ಕೋಠಾರಕರ, ನರೇಶ್ ತಳೇಕರ, ಚಂದ್ರಕಾಂತ ಕೋಠಾರಕರ ಹಾಗೂ ಪಡ್ತಿ ಸಮಾಜದ ಸದಸ್ಯರು, ಕ್ರೀಡಾಪಟುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ/ಬೈಕ್ ಸವಾರರ ಮೇಲೆ ಕರಡಿ ದಾಳಿ : ಗಂಭೀರ ಗಾಯ