ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಚಿಸಲಾದ ಗ್ಯಾರಂಟಿ ಯೋಜನೆ ಪ್ರಾಧಿಕಾರ ಇದೀಗ ವಿವಾದದ ಕೇಂದ್ರಬಿಂದುವಾಗುತ್ತಿದೆ. ಪ್ರಾಧಿಕಾರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಬದಲು ಸರ್ಕಾರದ ಖಜಾನೆಗೆ ಅನಗತ್ಯವಾಗಿ ಹೊರೆ ಆಗುತ್ತಿದೆ. ರಾಜ್ಯದಲ್ಲಿ ಈ ಪ್ರಾಧಿಕಾರಕ್ಕಾಗಿ 30ಕೋಟಿಗೂ ಅಧಿಕ ಹಣವವನ್ನ ಅನಾವಶ್ಯಕವಾಗಿ ಖರ್ಚು ಮಾಡುತ್ತಿದ್ದು.ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಧಿಕಾರದಲ್ಲಿ ಅಧ್ಯಕ್ಷರು ಮತ್ತು ಸದಸ್ಯರಾಗಿ ಪಕ್ಷದ ಕಾರ್ಯಕರ್ತರನ್ನು ನೇಮಿಸಿರುವುದು ಟೀಕೆಗೆ ಗುರಿಯಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಿಶೇಷ ಸ್ಥಾನಮಾನ ಮತ್ತು ನಿರಂತರ ಗೌರವಧನದ ಸೌಲಭ್ಯ ದೊರೆಯುತ್ತಿರುವ ಈ ಹುದ್ದೆಗಳು, ನೈಜ ಪ್ರಯೋಜನಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರೋತ್ಸಾಹದ ಸಾಧನವಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ಪ್ರಾಧಿಕಾರದ ಹೆಸರಿನಲ್ಲಿ ಸರಿ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣವನ್ನ ವೆಚ್ಚ ಮಾಡಲಾಗಿದ್ದು, ನೀರಿನಲ್ಲಿ ಹುಳಿ ಹಿಂಡಿದಂತಾಗಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ನೀಡಲಾಗುತ್ತಿದ್ದ ಗೃಹಲಕ್ಷ್ಮಿ ಹಣವನ್ನ ಸರಿಯಾಗಿ ನೀಡಲು ಸರಕಾರದಿಂದ ಸಾಧ್ಯವಾಗದೆ ಇದ್ದರೂ ಪ್ರಾಧಿಕಾರದ ಅಧ್ಯಕ್ಷರುಗಳಿಗಾಗಿ ರಾಜ್ಯದಲ್ಲಿ ಕೋಟಿ ಕೋಟಿ ಹಣ ಸುರಿಯುತ್ತಿದೆ.ಅದೆಷ್ಟೋ ಮಹಿಳೆಯರಿಗೆ ಇಂದಿಗೂ ಗೃಹ ಲಕ್ಷ್ಮಿ ಹಣ ಅವರ ಖಾತೆಗೆ ಜಮೆ ಆಗುತ್ತಿಲ್ಲ. ಅದನ್ನ ಸರಿ ಪಡಿಸಲು ಈ ಪ್ರಾಧಿಕಾರದ ಅಧ್ಯಕ್ಷರು ಯಾವುದೇ ಕೆಲಸವನ್ನೂ ಕೂಡ ಮಾಡುತ್ತಿಲ್ಲ. ಆದರೂ ಸರಕಾರ ಮಾತ್ರ ಜಿಲ್ಲಾ ಅಧ್ಯಕ್ಷರಿಂದ ತಾಲೂಕಾ,ಗ್ರಾಮೀಣ ಅಧ್ಯಕ್ಷರುಗಳಿಗೆ ಪ್ರತಿ ತಿಂಗಳೂ ಹಣ ಬಿಡುಗಡೆ ಮಾಡುತ್ತಿದೆ. ನಿಜವಾದ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಲಾಭ ಸಿಗುವ ಬದಲಿಗೆ ಪಕ್ಷದ ಹೆಸರಲ್ಲಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರಿಗಾಗಿಯೇ ಈ ಯೋಜನೆ ಜಾರಿ ಮಾಡಿರುವಂತಿದೆ.
ರಾಜ್ಯದಲ್ಲಿ ಪ್ರತಿ. ಜಿಲ್ಲಾ ಮಟ್ಟದ ಅಧ್ಯಕ್ಷರಿಗೆ ಪ್ರತಿ ತಿಂಗಳು 40 ಸಾವಿರ ಹಾಗೂ ತಾಲೂಕು ಮಟ್ಟದ ಅಧ್ಯಕ್ಷರಿಗೆ 25 ಸಾವಿರ ಹಣವನ್ನ ವೇತನ ರೂಪದಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದ ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಕೂಡ ಪ್ರತ್ಯೇಕವಾಗಿ ಮಾಸಿಕ ಹಾಗೂ ಸಭೆಯ ಭತ್ಯೆ ನೀಡಲಾಗುತ್ತಿದೆ. ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಪ್ರತಿ ಬಾರಿ ಭತ್ಯೆ ಲೆಕ್ಕದಲ್ಲಿ ಸಾವಿರಾರು ರೂಪಾಯಿ ಹಣ ವ್ಯಯಿಸಲಾಗುತ್ತಿದೆ.
2024ರ ಆಗಸ್ಟ್ನಿಂದ 2026ರ ಫೆಬ್ರವರಿವರೆಗೆ ಜಿಲ್ಲಾ ಅಧ್ಯಕ್ಷರಿಗೆ ಸುಮಾರು ಒಂದು ಜಿಲ್ಲೆಯಲ್ಲಿ 7.50 ಲಕ್ಷ ಪಾವತಿಸಲಾಗಿದೆ. ಉಪಾಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ಗೌರವಧನ ನೀಡಲಾಗಿದ್ದು, ಸದಸ್ಯರ ಸಭಾ ಭತ್ಯೆ ಸೇರಿ ಪ್ರತಿ ಜಿಲ್ಲೆಯಲ್ಲಿ ಕೋಟಿ ಕೋಟಿ ಹಣ ಅನಾವಶ್ಯಕವಾಗಿ ಖರ್ಚು ಮಾಡಲಾಗುತ್ತಿದೆ. ಇನ್ನೂ ತಾಲೂಕು ಮಟ್ಟದಲ್ಲೂ ಇದೇ ರೀತಿಯ ಖರ್ಚು ನಡೆಯುತ್ತಿದ್ದು, ಅಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ಪಾವತಿಸಲಾಗಿದೆ.
ಪ್ರಾಧಿಕಾರದ ಹೆಸರಿನಲ್ಲಿ ಉತ್ತರಕನ್ನಡ ಜಿಲ್ಲೆಯೊಂದಲ್ಲೆ ಸುಮಾರು 1.5 ಕೋಟಿ ಹಣ ವ್ಯಯವಾಗಿರುವ ಅಂದಾಜು ವ್ಯಕ್ತವಾಗಿದೆ. ಆದರೆ, ಜನಸಾಮಾನ್ಯರಿಗೆ ಇದರ ಸ್ಪಷ್ಟ ಪ್ರಯೋಜನ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದೇ ಇರುವುದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಈ ಪ್ರಾಧಿಕಾರದ ಅಗತ್ಯತೆ ಮತ್ತು ಪರಿಣಾಮಕಾರಿತ್ವವನ್ನು ಪುನರ್ ಪರಿಶೀಲಿಸಬೇಕೆಂಬ ಆಗ್ರಹಗಳು ಇದೀಗ ರಾಜ್ಯಾದ್ಯಂತ ಕೇಳಿಬರುತ್ತಿವೆ.ಗ್ಯಾರಂಟಿ ಯೋಜನೆಯ ಲಾಭ ನೇರವಾಗಿ ಫಲಾನುಭವಿಗಳಿಗೆ ಸಿಗುತ್ತಿರುವ ಪ್ರಯೋಜನಕ್ಕೆ ಬಾರದ ಈ ಪ್ರಾಧಿಕಾರ ಯಾಕೆ ಬೇಕು ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡುವಂತಾಗಿದೆ.

