ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಳೆಯಿಂದಾಗಿ ತಾಲೂಕಿನಾದ್ಯಂತ ಹಲವು ರಸ್ತೆಗಳು ಹದಗೆಟ್ಟು ಹೋಗಿದ್ದು, ಓಡಾಡಲು ಬಾರದ ಸ್ಥಿತಿ ಎದುರಾಗಿದೆ. ತಗ್ಗು, ದಿನ್ನೆಗಳಿಂದ ಕೂಡಿದ ರಸ್ತೆಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.‌ ಕುಮಟಾ-ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ವಾಲಗಳ್ಳಿ ಸಮೀಪ ಭಾರೀ ಪ್ರಮಾಣದಲ್ಲಿ ಹೊಂಡಬಿದ್ದು,ಕೆಸರುಮಯವಾಗಿದೆ.

ತಗ್ಗು, ದಿನ್ನೆಗಳಿಂದ ಕೂಡಿದ ರಸ್ತೆಗಳ ಮೇಲೆ ಓಡಾಡುವ ಜನರ ಪ್ರಾಣಸಂಕಟ ಕೇಳುವವರಿಲ್ಲದಂತಾಗಿದೆ. ತಗ್ಗು, ದಿನ್ನೆಗಳನ್ನು ಮುಚ್ಚಿಸುವ ಕನಿಷ್ಠ ಸೌಜನ್ಯವೂ ಸ್ಥಳೀಯ ಅಧಿಕಾರಿಗಳಿಗೆ ಇಲ್ಲದಂತಾಗಿದೆ.ವಾಲಗಳ್ಳಿ ಸಮೀಪ ಪ್ರತೀ ವರ್ಷವೂ ಮಳೆಗಾಲದಲ್ಲಿ ಬೃಹತ್ ಹೊಂಡ ಬಿದ್ದು, ಬೈಕ್ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದಾಗಿ 20.50ಕಿ.ಮೀ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿತ್ತು. ಇದರ ತಕ್ಷಣ ದುರಸ್ಥಿಗಾಗಿ 18.50ಲಕ್ಷ ರು. ಬೇಡಿಕೆ ಇಡಲಾಗಿದ್ದು, ಮಂಜೂರಿಯದ ಬಳಿಕ ಈ ಹಣದಲ್ಲಿ ಹೆರವಟ್ಟಾದಿಂದ ಸೊಪ್ಪಿನಹೊಸಳ್ಳಿ, ಮೇದಿನಿ ವರೆಗೆ ರಸ್ತೆ ದುರಸ್ತಿ ಮಾಡಲಾಗಿತ್ತು.ಆದರೆ ಮತ್ತೆ ಪುನಃ ಅದೇ ಜಾಗದಲ್ಲಿ ಹೊಂಡ ಬಿದ್ದಿದೆ.

ಗ್ರಾಮೀಣ ಭಾಗದ ಕೆಲ ರಸ್ತೆಗಳೂ ಸಹ ಮಳೆಗೆ ಕೊರಕಲು ಹೊಂಡ ಬಿದ್ದಿದೆ. ಇದರಿಂದ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ.ಮಳೆಯಿಂದ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಮರೋಪಾದಿಯಲ್ಲಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕಿದೆ.

ಕುಮಟಾ-ಶಿರಸಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾದ ಹಿನ್ನಲೆಯಲ್ಲಿ ಕುಮಟಾ-ಸಿದ್ದಾಪುರ ಮಾರ್ಗವಾಗಿ ನೂರಾರು ವಾಹನಗಳು ಪ್ರತಿನಿತ್ಯ ಇದೆ ಹೆದ್ದಾರಿಯಲ್ಲಿ ಓಡಾಡುತ್ತಿವೆ.ವಾಲಗಳ್ಳಿ ಸಮೀಪ ಉಂಟಾದ ಬೃಹತ್ ಹೊಂಡಗಳು,ಮಳೆ ಬಂದಾಗ ಹಾರೋಡಿ ಕ್ರಾಸ್ ಸಮೀಪ ಹೆದ್ದಾರಿ ಜಲಾವೃತವಾಗುವುದು ಪ್ರಯಾಣಿಕರಿಗೆ,ಬಸ್ ಮತ್ತು ಇತರೆ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ. ತುರ್ತು ಆಸ್ಪತ್ರೆ ಬರುವ ಗರ್ಭಿಣಿಯರು, ವೃದ್ಧರಿಗೆ ಈ ಹೊಂಡಮಯ ರಸ್ತೆ ವರ್ಷಂಪ್ರತಿ ತೊಂದರೆಗೀಡು ಮಾಡುತ್ತಿದೆ.ಹೀಗಾಗಿ ವಾಲಗಳ್ಳಿ ಸಮೀಪ ಉಂಟಾದ ಬೃಹತ್ ಹೊಂಡವನ್ನು ಇಲಾಖೆಯ ಅಧಿಕಾರಿಗಳು ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ