ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆದ್ದ ಸಂಭ್ರಮದ ವೇಳೆ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯನ್ನ ಸರಕಾರ ಗಂಭೀರವಾಗಿ ಪರಿಣಮಿಸಿದ್ದು, ಐದು ಮಂದಿ ಹಿರಿಯ ಅಧಿಕಾರಿಗಳನ್ನ ಈ ತಕ್ಷಣ ಜಾರಿಗೆ ಬರುವಂತೆ ಅಮಾನತ್‌ಗೊಳಿಸಿ ಆದೇಶಿಸಿದೆ.

ಈ ದುರಂತದ ಬಗ್ಗೆ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಭ್ರಮದ ಸಂರ್ಭದಲ್ಲಿ ಕ್ಷಣಾರ್ಧದಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೀಡಾಂಗಣದ ಹೊರಭಾಗದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ದೊಡ್ಡಮಟ್ಟದಲ್ಲಿ ಕಾಲ್ತುಳಿತ ಉಂಟಾಗಿತ್ತು.

ಘಟನೆಯ ಗಂಭೀರತೆಯನ್ನು ಗಮನಿಸಿದ ರಾಜ್ಯ ಸರ್ಕಾರ ತಕ್ಷಣ ಪ್ರತಿಕ್ರಿಯಿಸಿ, ಈ ದುರಂತಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡು, ಐದು ಮಂದಿ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಅಧಿಕಾರಿಗಳು:
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್
ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ ವಿಭಾಗ) ವಿಕಾಸ್ ಕುಮಾರ್ ವಿಕಾಸ್
ಡಿಸಿಪಿ (ಮಧ್ಯ ವಿಭಾಗ) ಶೇಖರ್
ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣ
ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್
ಸರ್ಕಾರದ ಪ್ರಕಾರ, ಘಟನೆ ನಡೆಯುವ ಸಮಯದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆ ಹಾಗೂ ಜನಸಂಚಾರ ನಿಯಂತ್ರಣ ಮಾಡಲಾಗಿತ್ತು. ಆದರೆ ಕ್ರೀಡಾಂಗಣದ ಸುತ್ತಮುತ್ತ ಜನಸಂಚಾರ ನಿರ್ವಹಣೆಯಲ್ಲಿ ಗಂಭೀರ ವಿಫಲತೆ ಕಂಡುಬಂದಿದ್ದು, ಇದರ ಫಲವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ.

ಪ್ರಕರಣವನ್ನು ತನಿಖೆ ಮಾಡುವ ಉದ್ದೇಶದಿಂದ ನ್ಯಾಯಾಂಗ ಸಮಿತಿ ರಚಿಸಲಾಗಿದೆ ಮತ್ತು ಸತ್ಯಾಂಶ ಹೊರತರಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅಧಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಸರ್ಕಾರ ತಳ್ಳಿ ಹಾಕಿಲ್ಲ.ಈ ದುರಂತ ರಾಜ್ಯದ ಕ್ರೀಡಾಭಿಮಾನಿಗಳಿಗೆ ಆಘಾತವನ್ನುಂಟುಮಾಡಿದ್ದು, ಗುರುತಿಸಲು ಸಾಧ್ಯವಾಗದಷ್ಟು ಜೀವಹಾನಿ ಉಂಟಾದ ದುರ್ಘಟನೆ ಎನ್ನಲಾಗಿದೆ.

ಇದನ್ನೂ ಓದಿ