ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ಸ್ಕೂಟಿ ಹಾಗೂ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭಂವಿಸಿ ಸ್ಕೂಟಿ ಮತ್ತು ಬೈಕ್ನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಅಂಬೇವಾಡಿಯಲ್ಲಿ ನಡೆದಿದೆ.
ಅಂಬೇವಾಡಿ ಗಾವಟಾಣ ನಿವಾಸಿ ಇಮ್ತಿಯಾಜ್ ಶಾಹೀದ್ ಪಟೇಲ್ ಅವರು ತನ್ನಿಬ್ಬರು ಮಕ್ಕಳೊಂದಿಗೆ ಬೈಕಿನಲ್ಲಿ ಗಾವಟಾಣದಿಂದ ದಾಂಡೇಲಿಗೆ ಬರುತ್ತಿರುವಾಗ ಅಂಬೇವಾಡಿ ರೈಲ್ವೆ ನಿಲ್ದಾಣದ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ದಾಂಡೇಲಿ ನಗರದಿಂದ ಅಂಬೇವಾಡಿ ಕಡೆ ವೇಗವಾಗಿ ಬರುತ್ತಿದ್ದ ಸ್ಕೂಟಿಯೊಂದು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಮ್ತಿಯಾಜ್ ಶಾಹೀದ್ ಪಟೇಲ್ ಹಾಗೂ ಅವರಿಬ್ಬರು ಮಕ್ಕಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಸ್ಕೂಟಿಯನ್ನು ಚಲಾಯಿಸುತ್ತಿದ್ದ ಸವಾರ ಭೀಮರಾವ್ ಮಲ್ಲಪ್ಪ ಕೆಂಬಾವಿ ಎಂಬಾತ ಬಸವೇಶ್ವರ ನಗರದ ನಿವಾಸಿಯಾಗಿದ್ದು, ಈತನಿಗೂ ಗಾಯವಾಗಿದೆ.
ಗಾಯಗೊಂಡ ನಾಲ್ವರನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾದ ಡಾ.ರಾಜೇಶ ಪ್ರಸಾದ ಅವರು ತ್ವರಿತ ಚಿಕಿತ್ಸೆಯನ್ನು ನೀಡಿದರು. ತೀವ್ರ ಸ್ವರೂಪದ ಗಾಯವಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ನಾಲ್ವರನ್ನು ಧಾರವಾಡಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ