ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶಿರಸಿ-ಕುಮಟಾ ರಸ್ತೆಯ ಶಿರಸಿ ನಗರದ ನೀಲೇಕಣಿಯಲ್ಲಿ ರಸ್ತೆಗಳಲ್ಲಿ ಬೃಹತ್ ಹೊಂಡಗಳು ಬಿದ್ದು ಜನರ ಜೀವಕ್ಕೆ ಸಂಚಕಾರ ತಂದಿದ್ದು, ಇದನ್ನು ಸರಿಪಡಿಸುವಲ್ಲಿ ಆರ್.ಎನ್.ಎಸ್. ಇನ್ಪ್ರಾ ಕಂಪನಿ ತಾತ್ಸಾರ ತೋರಿಸುತ್ತಿರುವುದ್ದರ ಹಿನ್ನಲೆಯಲ್ಲಿ ಮೇ.28ರೊಳಗೆ ಗುಂಡಿ ಮುಚ್ಚದೆ ಹೋದಲ್ಲಿ ಮೇ.29 ರಂದು ನಾವೇ ಸ್ವತಃ ಹಣವನ್ನು ಹಾಕಿ ಗುಂಡಿಯನ್ನು ಮುಚ್ಚುವ ಜೊತೆಗೆ ಆರ್.ಎನ್.ಎಸ್ ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ ಸೇರಿಸಲು ಆಗ್ರಹಿಸಲು ಕಂಪನಿಯ ವಿರುದ್ಧ ಹೈಕೋರ್ಟಿನಲ್ಲಿ ಪಿಐಎಲ್ ದಾಖಲಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ, ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ಶಿರಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಸಿಯ ನಿಲೇಕಣಿ ಭಾಗದಲ್ಲಿ ರಸ್ತೆಯಲ್ಲಿನ ಹೊಂಡಗಳನ್ನು ನೋಡಿದರೆ, ಆಡಳಿತ ಯಂತ್ರದ ಅವ್ಯವಸ್ಥೆ ಬಗ್ಗೆ ಅಸಹನೆ, ಆಕ್ರೋಶ ಹುಟ್ಟುತ್ತಿದೆ. ಕಳೆದ ಐದಾರು ವರ್ಷದಿಂದ ಆರಂಭವಾಗಿರುವ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕೆಲಸ ಪೂರ್ಣಗೊಂಡಿದ್ದರೂ ಸಹ, ನಗರ ಭಾಗದಲ್ಲಿನ ಪ್ರಮುಖ ಸ್ಥಳದಲ್ಲಿ ಪ್ರತಿನಿತ್ಯ ಜನತೆ ನರಕ ಯಾತನೆ ಅನುಭವಿಸುತ್ತಾ ಇದ್ದಾರೆ.
ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಿರಂತರ ಸಂಪರ್ಕ, ಸಭೆಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಲ್ಲಿಯವರೆಗೆ ಬಂದು ನಿಂತಿದೆ. ಈ ವಿಷಯದಲ್ಲಿ ಸಂಸದರ ಕಾರ್ಯ ಶೈಲಿಯನ್ನು ನಾನು ಶ್ಲಾಘಿಸುತ್ತೇನೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸದರಾದ ಮೇಲೆ ಹಲವಾರು ಅಭಿವೃದ್ಧಿಯನ್ನು ನಿರಂತರವಾಗಿ ಮಾಡ್ತಾ ಇದ್ದಾರೆ ಹಾವೇರಿ ಶಿರಸಿ ರಸ್ತೆಯ ಕಾಮಗಾರಿ ಕುರಿತು ಕೂಡ ನಿರಂತರ ಪ್ರಯತ್ನ ಮಾಡಿ ಇತ್ತೀಚೆಗೆ ಫಾರೆಸ್ಟ್ ಕ್ಲಿಯರೆನ್ಸ್ ಅನ್ನು ಮಾಡಿಸಿ ಆರ್ಡರ್ ಕೊಡಿಸಿದ್ದಾರೆ. ಅದೇ ರೀತಿಯಲ್ಲಿ ಕುಮಟಾ ಶಿರಸಿ ರಸ್ತೆಯ ಕೂಡ ಹಲವಾರು ಸಮಸ್ಯೆಗಳನ್ನ ಪರಿಹರಿಸಿದ್ದಾರೆ. ಹೈವೆ ಕಾಮಗಾರಿಯಲ್ಲಿ ರಾಜ್ಯ ಕೇಂದ್ರ ಮತ್ತು ರಾಜ್ಯ ಸರಕಾರದ ಇಬ್ಬರ ಜವಾಬ್ದಾರಿ ಇರುತ್ತದೆ. ಫಾರೆಸ್ಟ್ ಕ್ಲಿಯರೆನ್ಸ್, ಕರೆಂಟ್ ಕಂಬ ಶಿಫ್ಟ್ ಮಾಡುವುದು, ಭೂಸ್ವಾಧೀನ ಇದು ರಾಜ್ಯ ಸರ್ಕಾರದ ಜವಾಬ್ದಾರಿ ಇದರಲ್ಲಿ ಸಂಸದರನ್ನೋ ಅಥವಾ ಶಾಸಕರನ್ನೋ ಗುರಿಯಾಗಿಸಿ ಆರೋಪ ಮಾಡುವುದು ತಪ್ಪಾಗುತ್ತದೆ. ಶಾಸಕರಾದ ಭೀಮಣ್ಣ ನಾಯ್ಕ ಕೂಡ ರಸ್ತೆ ಕಾಮಗಾರಿ ಬೇಗ ಮುಗಿಯಬೇಕೆಂದು ಸಂಚಾರ ಬಂದ್ ಮಾಡಿ ಕಾಮಗಾರಿ ಮಾಡುವಂತೆ ಸೂಚನೆ ನೀಡಿದ್ದರು.
ಆದರೆ ಈಗಿನ ಅವ್ಯವಸ್ಥೆಗೆ ಜಿಲ್ಲಾಡಳಿತ ಸಮರ್ಪಕವಾಗಿ ಉತ್ತರ ಕೊಡಬೇಕು. ಮೊದಲು ಮೂರು ತಿಂಗಳು ರಸ್ತೆ ಬಂದ್ ಮಾಡ್ತೀವಿ ಅಂತ ಹೇಳಿದ್ದರು. ಕೊನೆಗೆ ಮತ್ತು ಮೂರು ತಿಂಗಳುಗಳ ಕಾಲ ವಿಸ್ತರಣೆ ಮಾಡಿದ್ದರು. ಮತ್ತೆ ಇನ್ನೂ ಒಂದು ತಿಂಗಳ ಅವರಿಗೆ ವಿಸ್ತರಣೆ ಮಾಡಿ ಕೊಡ್ತಾ ಇದ್ದೀರಿ. ಇದನ್ನು ಯಾರು ಕೇಳಿ ಮಾಡ್ತಾ ಇದ್ದೀರಿ? ಶಿರಸಿ ಕುಮಟಾ ರಸ್ತೆ ಸಂಪೂರ್ಣ ಬಂದಾಗಿದೆ. ಶುಕ್ರವಾರ ಬ್ರಿಜ್ ಒಡೆದು ರಸ್ತೆ ಬ್ಲಾಕ್ ಆಗಿದೆ. ಶಿರಸಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ತುರ್ತು ಚಿಕಿತ್ಸೆಗೆ ನಾವ್ ಮಂಗಳೂರಿಗೆ ಹೋಗಬೇಕು ಹಾಗಿದ್ದಾಗ ಆಂಬುಲೆನ್ಸ್ ಹೇಗೆ ಹೋಗುತ್ತದೆ ? ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.
ರಸ್ತೆಯನ್ನು ಬಂದ್ ಮಾಡಬೇಕಾದರೆ ಅದನ್ನು ವಿಸ್ತರಣೆ ಮಾಡಬೇಕಾದರೆ ಸಂಬಂಧಪಟ್ಟ ಸಂಸ್ಥೆಯವರಿಗೆ ಯಾಕೆ ಸ್ಟ್ರಿಕ್ಟ್ ಆರ್ಡರ್ ಕೊಡ್ತಾ ಇಲ್ಲ ? ಅಧಿಕಾರಿಗಳು ಏನಾದ್ರೂ ಕಂಪನಿ ಜೊತೆ ಡೀಲ್ ಮಾಡ್ಕೊಂಡಿದ್ದಾರೆಯೇ ಎಂದು ನಮಗೆ ಸಂಶಯ ಬರುತ್ತಿದೆ. ಮೂರು ವರ್ಷಕ್ಕೆ ಮುಗಿಯಬೇಕಾದ ಕೆಲಸ ಆರು ವರ್ಷ ಆದರೂ ಕೂಡ ಮುಗಿಯುತ್ತಿಲ್ಲ. ರಸ್ತೆಯಲ್ಲಿ ಬೃಹದಾಕಾರದ ಗುಂಡಿ ಬಿದ್ದರೂ ಕೂಡ ಮುಚ್ಚುವ ಕೆಲಸ ಮಾಡುತ್ತಿಲ್ಲ.ವನ್ಯಜೀವಿ ಸಂರಕ್ಷಣಾ ಪ್ರದೇಶವಾಗಿರುವ ದೇವಿಮನೆ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆಯೇ.? ಆ ಪ್ರದೇಶದಲ್ಲಿ ಕಾಡು ಮರಗಳ ಮತ್ತು ವನ್ಯ ಜೀವಿಗಳ ಸ್ಮಗ್ಲಿಂಗ್ ನಡೆಯಬಹುದು ಎನ್ನುವುದು ನನ್ನ ಆತಂಕ. ಈ ರೀತಿ ರಸ್ತೆ ಬಂದ್ ಆದರೆ ವನ್ಯ ಜೀವಿ ಮತ್ತು ಹಲವಾರು ವಿಶಿಷ್ಟ ಮರಗಳನ್ನ ಕಾಪಾಡುವುದು ಕಷ್ಟವಾಗುತ್ತದೆ. ಇದರ ಬಗ್ಗೆ ಕೂಡ ನಾವೆಲ್ಲರೂ ಯೋಚಿಸಬೇಕು ಎಂದರು.
ನಿವೃತ್ತ ಇಂಜಿನಿಯರ್ ವಿ.ಎಂ.ಭಟ್ಟ ಮಾತನಾಡಿ, ಶಿರಸಿಯಲ್ಲಿ ಒಂದು ನ್ಯಾಷನಲ್ ಹೈವೆ ಆಫೀಸ್ ಓಪನ್ ಆಗಬೇಕು. ಕುಮಟಾದಿಂದ ಹುಬ್ಬಳ್ಳಿವರೆಗೆ ಒಂದು ಆಫೀಸ್ ಇಲ್ಲ. ಹೆದ್ದಾರಿ ಪ್ರಾಧಿಕಾರದ ಏನಾದರು ವಿಷಯ ಇದ್ದರೆ ಯಾರನ್ನ ನಾವು ಕೇಳುವುದು ? ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಜೊತೆಗೆ ಆರ್.ಎನ್.ಎಸ್. ಕಂಪನಿಯು ತನಗಾಗುತ್ತಿರುವ ಸಮಸ್ಯೆಯನ್ನು ತಿಳಿಸಬೇಕು. ಯಾಕೆ ಕೆಲಸ ತಡವಾಗುತ್ತಿದೆ ಮತ್ತು ಅಧಿಕೃತವಾಗಿ ಯಾವ ಮುಗಿಸುತ್ತೀರಿ ಅಂತ ಪತ್ರಿಕಾ ಪ್ರಕಟಣೆ ಕೊಡಬೇಕು. ಇಲ್ಲವಾದಲ್ಲಿ ಧಾರವಾಡದ NHAI ಕಚೇರಿಗೆ ಮುತ್ತಿಗೆ ಹಾಕಲಾಗುವುದು ಮತ್ತು ಕೇಂದ್ರ ಮಂತ್ರಿಗಳಾಗಿರುವ ನಿತಿನ್ ಗಡ್ಕರಿಯವರ ಗಮನಕ್ಕೂ ತರುವುದಾಗಿ ಹೇಳಿದರು.
ಸಾಮಾಜಿಕ ಧುರೀಣ ಎಂ.ಎಂ. ಭಟ್ಟ ಕಾರೇಕೊಪ್ಪ ಮಾತನಾಡಿ, ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆಯೆಂದು ರಸ್ತೆ ಬಂದ್ ಮಾಡುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಜನರಿಗೆ ಹೆಚ್ಚು ತೊಂದರೆಯಾಗುತ್ತದೆ. ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಹೀಗೆ ಇರುವ ರಸ್ತೆಯನ್ನು ಬಂದ್ ಮಾಡಿದರೆ, ಜನರಿಗಾಗುವ ತೊಂದರೆಗೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಸಮರ್ಪಕ ಉತ್ತರಿಸಲಿ
ಫೆ.25 ರವರೆಗೆ ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹಾಕಲಾಗಿತ್ತು. ಆದರೆ ಅದನ್ನು ಮತ್ತೆ ಮೂರು ತಿಂಗಳು ಮುಂದೂಡಲಾಯಿತು. ಮತ್ತೆ ಇದೀಗ 1 ತಿಂಗಳು ಮುಂದೂಡಲಾಗಿದೆ. ಯಾರನ್ನು ಕೇಳಿ ಈ ರೀತಿ ನಿರ್ಬಂಧ ಮುಂದುವರೆಸಿದ್ದೀರಿ ? ಕಾಮಗಾರಿ ವಿಳಂಬವಾಗಲು ಕಾರಣವೇನು? ಕಾಮಗಾರಿ ವಿಳಂಬ ಮಾಡಿದ ಕಂಪನಿಗೆ ಏನು ದಂಡ ವಿಧಿಸಿದ್ದೀರಿ ? ಇನ್ನು ಎಷ್ಟು ವರ್ಷ ಶಿರಸಿ- ಕುಮಟಾ ರಸ್ತೆ ಸಂಚಾರ ನಿರ್ಬಂಧ ಹೇರಲಿದ್ದೀರಿ ? ಜಿಲ್ಲಾಧಿಕಾರಿಗಳು, ಆರ್.ಎನ್.ಎಸ್ ಕಂಪನಿ, ಹಾಗೂ ಎನ್ಎಚ್ಎಐ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಸ್ತೆ ಕಾಮಗಾರಿ ವಿಷಯದಲ್ಲಾದ ಅವ್ಯವಸ್ಥೆ ಕುರಿತು ಉತ್ತರ ನೀಡಲಿ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಮೂರು ದಿನ ಗಡುವು
ಇನ್ನು ಮೂರು ದಿನದಲ್ಲಿ ಆರ್.ಎನ್.ಎಸ್. ಕಂಪನಿ ರಸ್ತೆ ಗುಂಡಿ ಮುಚ್ಚದಿದ್ದರೆ ನಾವೆಲ್ಲರು ಸ್ವಂತ ಹಣದಿಂದ ಗುಂಡಿ ಮುಚ್ಚುತ್ತೇವೆ. ಜನರೂ ಸಹ ತಮ್ಮ ಕೈಲಾದಷ್ಟು ಮಣ್ಣು, ಕಲ್ಲುಗಳನ್ನು ತರುವ ಮೂಲಕ ನಮ್ಮ ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸುತ್ತೇನೆ. – ಅನಂತಮೂರ್ತಿ ಹೆಗಡೆ.
ಇದನ್ನೂ ಓದಿ