ಸುದ್ದಿಬಿಂದು ಬ್ಯೂರೋ ವರದಿ

ಗೋಕರ್ಣ: ಮನೆಯೊಂದರಲ್ಲಿ ನಡೆದಿದ್ದ ಸುಮಾರು 87 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಗೋಕರ್ಣ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಸುಮಾರು 10.42 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಿಂಗಳಬೈಲ್, ಹಿಲ್ಲೂರು ನಿವಾಸಿ ಶ್ರೀಮತಿ ಶ್ರೀದೇವಿ ಕೋಂ ಅನಂತ ಹೆಬ್ಬಾರ್ ಅವರು ನೀಡಿದ ದೂರಿನ ಮೇರೆಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 47/2026, ಕಲಂ 305 ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2026ರ ಮಾರ್ಚ್ 27ರ ರಾತ್ರಿ 11.55ರಿಂದ ಮಾರ್ಚ್ 28ರ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಶ್ರೀದೇವಿ ಹಾಗೂ ಅವರ ಅಕ್ಕನ ಮಗಳು ಶ್ರೀಮತಿ ಪ್ರೇಮಾ ರಮೇಶ ಹೆಬ್ಬಾರ್ ಅವರಿಗೆ ಸೇರಿದ ಸುಮಾರು 87 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಅವರ ನೇತೃತ್ವದ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹೆಬಳೆ, ಗಾಂಧಿನಗರ, ಭಟ್ಕಳ ನಿವಾಸಿ ಪರಮೇಶ್ವರ ತಂದೆ ಮಾದೇವ ನಾಯ್ಕ (46) ಎಂಬಾತನನ್ನು ಸೆಪ್ಟೆಂಬರ್ 16ರಂದು ಗೋಕರ್ಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಆರೋಪಿಯಿಂದ ಕಳ್ಳತನಕ್ಕೆ ಸಂಬಂಧಿಸಿದ ಸುಮಾರು 10,42,000 ರೂ. ಮೌಲ್ಯದ ಬಂಗಾರದ ಆಭರಣಗಳು, ನಾಲ್ಕು ಮೊಬೈಲ್ ಸೆಟ್‌ಗಳು, ದೂರುದಾರರು ಹಾಗೂ ಸಾಕ್ಷಿದಾರರಿಗೆ ಸಂಬಂಧಿಸಿದ ಆಧಾರ್ ಕಾರ್ಡ್‌ಗಳು ಮತ್ತು ಮಂಕಿ ಕ್ಯಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರ ಪ್ರಕಾರ, ಆರೋಪಿ ಪರಮೇಶ್ವರ ನಾಯ್ಕ 2003ರಿಂದಲೂ ಹಲವಾರು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಪೈಕಿ ಆರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಕೆಎಸ್‌ಪಿಎಸ್, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್., ಪಿಎಸ್‌ಐ (ತನಿಖೆ) ಸುನಿಲ್ ಎಂ.ಎ., ಪಿಎಸ್‌ಐ (ಕಾ.ಸು) ಅನಿಲ್ ಬಿ.ಎಂ., ಹೆಡ್ ಕಾನ್‌ಸ್ಟೇಬಲ್‌ಗಳಾದ ರಾಜೇಶ್ ಹೆಚ್. ನಾಯ್ಕ, ವಸಂತ್ ನಾಯ್ಕ, ಗೋರಖನಾಥ ರಾಣೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀಕಾಂತ್ ಕಟಬರ, ಪರಮೇಶ್ವರ ಬೆಂಡ್ಲಗಟ್ಟಿ, ಶ್ರವಣಕುಮಾರ, ಸಂತೋಷ ಮಳಗೌಡರ್, ಮಣಿಕಂಠ ಗೌಡ, ಮದನ ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಹವಾಲ್ದಾರ್ ಮಹಮ್ಮದ್ ಶಫಿ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಉದಯ ಗುನಗಾ, ಬಬನ್ ಕದಂ, ಮಹಾಲಿಂಗ ಅವರ ಸಹಕಾರದಿಂದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಹಾಗೂ ಕಳುವಾದ ಸ್ವತ್ತುಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ/ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನಲೆ ಕಾರವಾರದಲ್ಲಿ ವಿಶೇಷ ಪೂಜೆ