ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ನಗರದ ಅಂಬೇವಾಡಿ ಪ್ರದೇಶದಲ್ಲಿ ಚಿರತೆಯೊಂದರ ಓಡಾಟ ಮುಂದುವರಿದಿದ್ದು, ಗುರುವಾರ ತಡರಾತ್ರಿ ಹೋಮ್ಸ್ಟೇ ಸಮೀಪ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಬೆಳಗಾವಿಯಿಂದ ದಾಂಡೇಲಿಗೆ ಆಗಮಿಸುತ್ತಿದ್ದ ದಾಂಡೇಲಿಯ ಸಂಜಯ ಕಲ್ಯಾಣಿ ಅವರು ಅಂಬೇವಾಡಿಯ ಹೋಮ್ಸ್ಟೇ ಸಮೀಪ ಚಿರತೆಯನ್ನು ಗಮನಿಸಿದ್ದಾರೆ. ಕೂಡಲೇ ಸುರಕ್ಷಿತ ಅಂತರದಲ್ಲಿ ವಾಹನ ನಿಲ್ಲಿಸಿ, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಳೆದ ಕೆಲವು ದಿನಗಳಿಂದ ಅಂಬೇವಾಡಿ, ಕೆಪಿಟಿಸಿಎಲ್ ಗ್ರಿಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ.
ರಾತ್ರಿ ಸಮಯದಲ್ಲಿ ಚಿರತೆ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.
ಅಂಬೇವಾಡಿ ಪ್ರದೇಶದಲ್ಲಿ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಚಿರತೆಯ ಚಲನವಲನದ ಮೇಲೆ ನಿಗಾ ಇಟ್ಟು, ಅಗತ್ಯ ಸ್ಥಳದಲ್ಲಿ ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿರತೆ ಓಡಾಟದಿಂದ ಆತಂಕಗೊಂಡಿರುವ ಅಂಬೇವಾಡಿ ಭಾಗದ ಜನರಿಗೆ ಅರಣ್ಯ ಇಲಾಖೆ ಶೀಘ್ರದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವ ಮೂಲಕ ಧೈರ್ಯ ತುಂಬಬೇಕಿದೆ.

