ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಹೊದ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೇತ್ರಾವತಿ ಶ್ಯಾನಭಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ಪರ ಹಾಗೂ ವಿರೋಧವಾಗಿ ಪ್ರಚಾರಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರಿಗೂ ದೂರು ಸಲ್ಲಿಸಲಾಗಿದ್ದು,ಈ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ದೂರಿನ ಬೆನ್ನಲ್ಲೇ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಭಜಂತ್ರಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪರ-ವಿರೋಧದ ಪೊಸ್ಟ್ ಮಾಡಿರುವ ಬಗ್ಗೆ ಸ್ಥಳೀಯರು ವಿರೋಧ ಮಾಡಿದ್ದಲ್ಲದೆ. ಶಿಕ್ಷಣ ಇಲಾಖೆಗೂ ದೂರು ನೀಡಿದರು. ಈ ಬಗ್ಗೆ ಪತ್ರಿಕೆಗಳಲ್ಲಿಯೂ ಸಾಕಷ್ಟು ವರದಿಗಳು ಸಹ ಪ್ರಕಟವಾಗಿತ್ತು. ಆದರೂ ಕ್ರಮ ಆಗದೆ ಇರುವ ಬಗ್ಗೆ ಅಸಮಧಾನಗೊಂಡ ಸ್ಥಳೀಯರು ಪತ್ರಿಕೆಯ ವರದಿಗಳು ಹಾಗೂ ಫೇಸ್‌ಬುಕ್‌ ನಲ್ಲಿ ಕಾಮೆಂಟ್ ಮಾಡಿರುವ ಎಲ್ಲಾ ದಾಖಲೆಗಳನ್ನು ಇಟ್ಟು ಶಿಕ್ಷಣ ಸಚಿವರಿಗೂ ದೂರು ನೀಡಿದ್ದಾರೆನ್ನಲಾಗಿದೆ..

ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದು ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವುದು ಸೇವಾ ನಡತೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ದೂರುದಾರರು, ಶಿಕ್ಷಕಿಯ ವಿರುದ್ಧ ಸೂಕ್ತ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಶಿಕ್ಷಕಿಯ ವೈಯಕ್ತಿಕ ಫೇಸ್‌ಬುಕ್ ಖಾತೆಯಲ್ಲಿ ಹಲವು ತಿಂಗಳುಗಳಿಂದ ವಿವಿಧ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಪ್ರಚಾರಾತ್ಮಕ ಪೋಸ್ಟ್‌ಗಳು, ವಿಡಿಯೊಗಳು ಹಾಗೂ ರಾಜಕೀಯ ವಿಚಾರಗಳನ್ನು ಒಳಗೊಂಡ ಅಭಿಪ್ರಾಯಗಳು ಮತ್ತು ಕಾಮೆಂಟ್‌ಗಳು ಪ್ರಕಟವಾಗುತ್ತಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣಾಭಿಮಾನಿಗಳು, ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಈ ದೂರಿನ ಆಧಾರದ ಮೇಲೆ ತಾಲೂಕು ಹಂತದ ತನಿಖೆ ಆರಂಭಿಸಿರುವ ಬಿಇಒ ಬಿ.ಎಸ್. ಭಜಂತ್ರಿ ಅವರು ಹೊದ್ಕೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಚರ್ಚೆಗೆ
ಶಿಕ್ಷಕಿಯ ಫೇಸ್‌ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರ ಕುರಿತು ಪರ-ವಿರೋಧದ ಅಭಿಪ್ರಾಯಗಳು, ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಹಾಗೂ ವಿಡಿಯೊಗಳನ್ನು ಹಂಚಿಕೊಂಡಿರುವುದು ಪ್ರಕರಣದ ಪ್ರಮುಖ ಆರೋಪವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ತನಿಖೆ ನಡೆಸಿ ಅಗತ್ಯ ಕ್ರಮ
“ಹೊದ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೇತ್ರಾವತಿ ಶ್ಯಾನಭಾಗ ಅವರ ವಿರುದ್ಧ ನೀಡಿದ ದೂರಿನ ಹಿನ್ನೆಲೆಯಲ್ಲಿ ಹೊನ್ನಾವರ ಬಿಇಒ ಅವರು ಶಿಕ್ಷಕಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಶಿಕ್ಷಕಿ ಶೀಘ್ರದಲ್ಲಿ ಇಲಾಖೆಗೆ ಉತ್ತರ ನೀಡಬೇಕು. ಇಲಾಖಾ ಹಂತದಲ್ಲಿ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಕಾರವಾರ ಡಿಡಿಪಿಐ ಲತಾ ಎಂ. ನಾಯಕ ತಿಳಿಸಿದ್ದಾರೆ.