ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಜಿಲ್ಲಾ ವಕೀಲರ ಸಂಘಕ್ಕೆ ಬುಧವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಿರಿಯ ವಕೀಲ ನಾಗರಾಜ ನಾಯಕ ಆಯ್ಕೆಯಾಗಿದ್ದಾರೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ನಾಲ್ವರು ವಕೀಲರು ಸ್ಪರ್ಧಿಸಿದ್ದರು. ವಕೀಲರಾದ ನಾಗರಾಜ ವಿ ನಾಯಕ, ಎಂ.ಎಲ್ ನಾಯ್ಕ, ಸಂತೋಷ್ ಭಾಗ್ವತ್ ಮತ್ತು ರವಿ ಬೇಳೂರಕರ್ ಸ್ಪರ್ಧಿಸಿದ್ದು ಹೆಚ್ಚು ಮತಗಳನ್ನ ಪಡೆಯುವ ಮೂಲಕ ನಾಗರಾಜ ವಿ ನಾಯಕ ಆಯ್ಕೆಯಾದರು.ಇನ್ನು ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ವಕೀಲರಾದ ನಾಗರಾಜ ದೇಶಭಂಡಾರಿ, ಹಾಗೂ ಜಿ.ಎಫ್ ನಾಯ್ಕ, ಸ್ಪರ್ಧಿಸಿದ್ದು ನಾಗರಾಜ ದೇಶಭಂಡಾರಿ ಹೆಚ್ಚು ಮತ ಪಡೆದು ಆಯ್ಕೆಯಾದರು. ಸಂಘದ ಖಜಾಂಚಿಯಾಗಿ ಪದ್ಮಾ ತಾಂಡೇಲ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರುತಿ ಬಿ ನಾಯ್ಕ ಭಟ್ಕಳ, ಮಹಿಳಾ ಸದಸ್ಯರಾಗಿ ದೀಪಾ ಎಸ್ ನಾಯ್ಕ ಹಾಗೂ ಸುಮಿತಾ ಪಿ ಭೂತೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆ ನಂತರ ಮಾತನಾಡಿದ ನಾಗರಾಜ ನಾಯಕ ಜಿಲ್ಲಾ ವಕೀಲರ ಸಂಘ ಕಾರವಾರದ ಅಧ್ಯಕ್ಷನಾಗ ನನ್ನನ್ನು ಆರಿಸಿ ತಂದ ಜಿಲ್ಲಾ ವಕೀಲರ ಸಂಘದ ವಕೀಲರಿಗೆ ಧನ್ಯವಾದಗಳು. ಜಿಲ್ಲಾ ವಕೀಲರ ಸಂಘವು 1862ರಲ್ಲು ಪ್ರಾರಂಭವಾಗಿದ್ದು ಬುದ್ದಿವಂತ ವಕೀಲರನ್ನು ಸಮಾಜಕ್ಕೆ ಕೊಟ್ಟ ವಕೀಲರ ಸಂಘವೆಂದೇ ಈ ಸಂಘಕ್ಕೆ ಹೆಸರಿದೆ. ವಿಶ್ವ ಕವಿ ರವೀಂದ್ರನಾಥ ಟ್ಯಾಗೋರ್ ರವರ ಅಣ್ಣ ಸತ್ಯೇಂದ್ರನಾಥ ಟ್ಯಾಗೋರ್ ಸಹ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧಿಶರಾಗಿ ಸೇವೆ ಸಲ್ಲಿಸಿದ್ದರು.
ಆ ಕಾಲದಲ್ಲಿ ರವೀಂದ್ರನಾಥ ಟ್ಯಾಗೋರ್ ರವರು ಕಾರವಾರಕ್ಕೆ ಬಂದು ಉಳಿದಿದ್ದು, ಕಾರವಾರದ ಸೌಂದರ್ಯಕ್ಕೆ ಮರುಳಾಗಿ ಕಾರವಾರವನ್ನು ಕಾಶ್ಮೀರಕ್ಕೆ ಹೋಲಿಸಿದ್ದರು. ಇಂತಹ ಹತ್ತು ಹಲವು ಸಾಧನೆಗಳಿಗೆ ಹೆಸರಾದ ಈ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿರುವದು ತುಂಬಾ ಖುಷಿ ಕೊಟ್ಟಿದೆ. ಜಿಲ್ಲಾ ವಕೀಲರ ಸಂಘದ ಘನತೆಯನ್ನು ಎತ್ತಿ ಹಿಡಿಯುವ ಕಾಯಕವನ್ನು ಸದಾ ಮಾಡುತ್ತೇನೆ. ಎಂದು ತಿಳಿಸಿದರು.

