ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬಿಕಾನಗರ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾದ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಈ ವೇಳೆ ಕೆಲವು ಪ್ರವಾಸಿಗರು ಕರಡಿಯ ಹಿಂದೆ ತಮ್ಮ ವಾಹನ ಚಲಾಯಿಸಿ ಬೆನ್ನಟ್ಟಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಅಂಬಿಕಾನಗರ ರಸ್ತೆಯಲ್ಲಿ ಕರಡಿ ರಸ್ತೆ ದಾಟುತ್ತಿರುವುದನ್ನು ಕಂಡ ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸುವ ಬದಲು ಅದರ ಹಿಂದೆ ಜೋರಾಗಿ ವಾಹನ ಚಲಾಯಿಸಿ ಅಟ್ಟಾಡಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಹನದ ಶಬ್ದ ಹಾಗೂ ಬೆನ್ನಟ್ಟುವಿಕೆಯಿಂದ ಬೆದರಿದ ಕರಡಿ ಪ್ರಾಣ ಉಳಿಸಿಕೊಳ್ಳಲು ವೇಗವಾಗಿ ಓಡಿಹೋಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಅಸಭ್ಯ ವರ್ತನೆಗೆ ಪರಿಸರ ಪ್ರೇಮಿಗಳು, ವನ್ಯಜೀವಿ ಆಸಕ್ತರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವುದು, ಬೆನ್ನಟ್ಟುವುದು ಹಾಗೂ ಅವುಗಳನ್ನು ಪ್ರಚೋದಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ವರ್ತನೆ ವನ್ಯಜೀವಿಗಳ ಜೀವಕ್ಕೂ ಅಪಾಯ ಉಂಟುಮಾಡುವುದರ ಜೊತೆಗೆ ಮಾನವ ಜೀವಕ್ಕೂ ಅಪಾಯವನ್ನು ತಂದೊಡ್ಡಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕರಡಿಯನ್ನು ಬೆನ್ನಟ್ಟಿದ ಪ್ರವಾಸಿಗರನ್ನು ಗುರುತಿಸಿ, ಅವರ ವಿರುದ್ಧ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಅರಣ್ಯ ಪ್ರದೇಶದಲ್ಲಿ ಪ್ರಯಾಣಿಸುವ ಪ್ರವಾಸಿಗರು ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಭೀತಾಗಿದೆ.
ಇದನ್ನೂ ಓದಿ/ಮಧ್ಯರಾತ್ರಿ ಭೀಕರ ಅಗ್ನಿ ಅವಘಡ: 70ಕ್ಕೂ ಅಧಿಕ ಚೀಲ ಚಾಲಿ ಅಡಿಕೆ ಬೆಂಕಿಗಾಹುತಿ

