ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪೊಲೀಸರ ಎದುರೇ ರಂಪಾಟ ನಡೆಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಹಾಗೂ ಎಸ್ಸೈ ಅಮಾನತ್ತಿಗೂ ಕಾರಣವಾಗಿದ್ದ ರೌಡಿ ಶೀಟರ್ “ಮಂಜುನಾಥ ಅಲಿಯಾಸ್ ‘ಮಚ್ಚ್ ಮಂಜ್ ನನ್ನು ಪೊಲೀಸರು ರವಿವಾರ ರಾತ್ರಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಿದ್ದಾರೆ.
ಇತ್ತೀಚೆಗೆ ಹಳಿಯಾಳ ಪಟ್ಟಣದ ಮೌರ್ಯ ಹೋಟೆಲ್ ಸಮೀಪ ನಡೆದ ಘಟನೆಯಲ್ಲಿ ಮಚ್ಚ್ ಮಂಜ್ ಪೊಲೀಸರ ಎದುರೇ ಗಲಾಟೆ ನಡೆಸಿದ್ದ. ಈ ವೇಳೆ ಎಸ್ಸೈ ಬಸವರಾಜ ಅವರ ಜೀಪ್ ತಡೆದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ರೌಡಿ ಶೀಟರ್ ದುಂಡಾವರ್ತನೆ ತೋರುತ್ತಿದ್ದರೂ ಪೊಲೀಸರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಕರ್ತವ್ಯ ಲೋಪದ ಆರೋಪದಡಿ ಎಸ್ಸೈ ಬಸವರಾಜ ಅವರನ್ನು ಅಮಾನತುಗೊಳಿಸಿದ್ದರು. ಅಲ್ಲದೇ,ಘಟನೆಯ ವೇಳೆ ಕರ್ತವ್ಯದಲ್ಲಿದ್ದ ಎಂಟು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಘಟನೆಯ ಬಳಿಕ ಮಚ್ಚ್ ಮಂಜ್ ಹಳಿಯಾಳದಿಂದ ಪರಾರಿಯಾಗಿದ್ದು,ಆತನ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಕೊನೆಗೂ ರವಿವಾರ ರಾತ್ರಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಹಳಿಯಾಳಕ್ಕೆ ಕರೆತಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

