ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. ವೇಗವಾಗಿ ಬೆಳೆಯುತ್ತಿರುವ ಹೊನ್ನಾವರ ಪ್ರವಾಸೋದ್ಯಮವನ್ನು ದೇಶದ ಖ್ಯಾತ ಉದ್ಯಮಿ Anand Mahindra ಮುಕ್ತಕಂಠದಿಂದ ಹೊಗಳಿದ್ದು, ಶರಾವತಿ ನದಿಯ ಹಿನ್ನೀರಿನ (Backwater Tourism ) ಪ್ರದೇಶವನ್ನು ‘ಮುಚ್ಚಿಟ್ಟ ವಜ್ರ’ (Hidden Gem) ಹಾಗೂ ‘ಮಾಂತ್ರಿಕ ಭೂದೃಶ್ಯ’ ಎಂದು ಬಣ್ಣಿಸಿದ್ದಾರೆ.
ಅವರ ಈ ಮೆಚ್ಚುಗೆಯು ಹೊನ್ನಾವರದ ನೈಸರ್ಗಿಕ ಸೌಂದರ್ಯವನ್ನು ರಾಷ್ಟ್ರದ ಗಮನಕ್ಕೆ ಮತ್ತಷ್ಟು ತಂದಿದೆ.
ಹೊನ್ನಾವರ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ವಿಶೇಷವಾಗಿ ಶರಾವತಿ ನದಿಯ ಹಿನ್ನೀರಿನಲ್ಲಿ ನಡೆಯುವ ಬೋಟಿಂಗ್, ಹಸಿರು ಪ್ರಕೃತಿ, ಕಾಂಡ್ಲಾ ಕಾಡುಗಳು ಹಾಗೂ ಸಮುದ್ರ ತೀರದ ಮನಮೋಹಕ ದೃಶ್ಯಗಳು ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಕೇರಳದ ಹಿನ್ನೀರಿನಂತೆ, ಹೊನ್ನಾವರದ ಶರಾವತಿ ಹಿನ್ನೀರಿನ ಸೌಂದರ್ಯವೂ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. Sharavathi River ಜೋಗದಲ್ಲಿ ಅಬ್ಬರಿಸಿ ಹರಿಯುವ ಶರಾವತಿ ನದಿ ಹೊನ್ನಾವರದಲ್ಲಿ ಶಾಂತವಾಗಿ ಅರಬ್ಬಿ ಸಮುದ್ರ ಸೇರುವ ಅಪರೂಪದ ದೃಶ್ಯ, ಕನ್ನಡಿಯಂತೆ ಕಂಗೊಳಿಸುವ ಹಿನ್ನೀರು ಹಾಗೂ ಕರಾವಳಿಯನ್ನು ಸಂರಕ್ಷಿಸುವ ಕಾಂಡ್ಲಾ ಕಾಡುಗಳ ಪರಿಸರ ಮಹತ್ವವನ್ನು ಅವರು ವಿಶೇಷವಾಗಿ ರೂಪುಗೊಳ್ಳುತ್ತಿದೆ
ಪ್ರಸ್ತುತ ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದೇಶದ ವಿವಿಧ ರಾಜ್ಯಗಳ ಜೊತೆಗೆ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದ್ದು,ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ.
ಹೊನ್ನಾವರ (Honnavar)ತಾಲೂಕಿನ ಪ್ರಮುಖ ಆಕರ್ಷಣೆಗಳಾದ ಶರಾವತಿ ಹಿನ್ನೀರಿನ ಬೋಟಿಂಗ್,ಕಾಂಡ್ಲಾ ಕಾಡು, ಇಕೋ ಬೀಚ್ ಹಾಗೂ Apsarakonda Falls ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು ಹಾಗೂ ಸಾಹಸ ಪ್ರವಾಸಿಗರಿಗೆ ಹೊನ್ನಾವರ ಈಗ ನೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿದೆ. ಒಮ್ಮೆ ಕುಡಿಯುವ ನೀರು ಹಾಗೂ ಕೃಷಿಗೆ ಮಾತ್ರ ಸೀಮಿತವಾಗಿದ್ದ ಶರಾವತಿ ನದಿ, ಇದೀಗ ಬೋಟಿಂಗ್ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಸ್ಥಳೀಯ ಆರ್ಥಿಕತೆಗೆ ಹೊಸ ಬಲ ನೀಡುತ್ತಿರುವ ಈ ಬೆಳವಣಿಗೆ, ಹೊನ್ನಾವರವನ್ನು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮುಂಚೂಣಿಗೆ ತರುತ್ತಿದೆ. ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (anand-mahindra) ಅವರ ಮೆಚ್ಚುಗೆಯ ಬಳಿಕ ಹೊನ್ನಾವರ ಪ್ರವಾಸೋದ್ಯಮಕ್ಕೆ ಮತ್ತಷ್ಟು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ಪ್ರವಾಸೋದ್ಯಮ ವಲಯವೂ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಹೊನ್ನಾವರದ ನೈಸರ್ಗಿಕ ಸಂಪತ್ತನ್ನು ಇನ್ನಷ್ಟು ಜಗತ್ತಿಗೆ ಪರಿಚಯಿಸುವ ಅವಕಾಶ ಇದಾಗಿದೆ.



