ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಒಂದು ಹೊತ್ತಿನ ಊಟಕ್ಕಾಗಿ ನದಿಗೆ ಇಳಿದವರು ಮತ್ತೆ ಜೀವಂತವಾಗಿ ಮನೆಗೆ ಮರಳಲಿಲ್ಲ. ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟೆಹಕ್ಕಲು ನದಿಯಲ್ಲಿ ನಡೆದ ಕಪ್ಪೆಚಿಪ್ಪು ದುರಂತ ಹಲವು ಕುಟುಂಬಗಳ ಬದುಕನ್ನೇ ಚೂರುಚೂರು ಮಾಡಿದ್ದು, ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದೆ.
ಭಾನುವಾರ ಬೆಳಿಗ್ಗೆ ಕಪ್ಪೆಚಿಪ್ಪು ತೆಗೆಯಲೆಂದು ಮನೆಯಿಂದ ತೆರಳಿದ್ದ 14 ಜನರಲ್ಲಿ 11 ಮಂದಿ ನೀರುಪಾಲಾದ ಘಟನೆ ಇಡೀ ಉತ್ತರ ಕನ್ನಡ ಜಿಲ್ಲೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರಲ್ಲಿ 9 ಮಹಿಳೆಯರು ಹಾಗೂ 2 ಪುರುಷರು ಸೇರಿದ್ದಾರೆ. ಬದುಕಿಗಾಗಿ ನದಿಗೆ ಇಳಿದವರು ಶವವಾಗಿ ಮರಳಿರುವುದು ಗ್ರಾಮಸ್ಥರ ಮನಸ್ಸನ್ನ ದುಖಃದ ಕಡಲಿಗೆ ತಳ್ಳಿದೆ. ದುರಂತದಲ್ಲಿ ಮೃತಪಟ್ಟ ಮಾದೇವ ನಾಯ್ಕ್ ಹಾಗೂ ಲಕ್ಷ್ಮೀ ನಾಯ್ಕ್ ದಂಪತಿಯ ಮಕ್ಕಳು ದರ್ಶನ ಮತ್ತು ಕೀರ್ತನಾ ಈಗ ಅಕ್ಷರಶಃ ಅನಾಥರಾಗಿದ್ದಾರೆ. ಕುಟುಂಬದ ಬದುಕು ತಂದೆ-ತಾಯಿಯ ಕೂಲಿ ಕೆಲಸದ ಮೇಲೆಯೇ ನಿಂತಿತ್ತು. ಮಕ್ಕಳ ಶಿಕ್ಷಣದಿಂದ ಹಿಡಿದು ದಿನನಿತ್ಯದ ಜೀವನವರೆಗೂ ಅವರ ದುಡಿಮೆಯೇ ಆಧಾರವಾಗಿತ್ತು.
ಈಗ ಆ ಮನೆಯಲ್ಲೇ ಅಮ್ಮನ ಕರೆಯಿಲ್ಲ, ಅಪ್ಪನ ಧೈರ್ಯದ ಮಾತಿಲ್ಲ. ಬೆಳಿಗ್ಗೆ ತಿಂಡಿ ಮಾಡಿಕೊಡುವ ತಾಯಿಯೂ ಇಲ್ಲ. ಕಷ್ಟ ಹೇಳಿಕೊಳ್ಳಲು ಹತ್ತಿರದ ಬಂಧುಗಳೂ ಇಲ್ಲದಂತಾಗಿದೆ. ಏಕೆಂದರೆ ಚಿಕ್ಕಪ್ಪ-ಚಿಕ್ಕಮ್ಮ ಸಹ ಇದೇ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನೊಂದು ಕುಟುಂಬದಲ್ಲಿ ಲಕ್ಷ್ಮೀ ಶಿವರಾಮ ನಾಯ್ಕ್ ಸಾವಿನಿಂದ ನಾಲ್ವರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು ತಾಯಿಯ ಆಸರೆಯಲ್ಲೇ ಬದುಕುತ್ತಿದ್ದರು. ಈಗ ಆ ನೆರಳೂ ಕಳಚಿದೆ.
ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಈ ಮಕ್ಕಳು ಈಗ ಯಾರ ಆಶ್ರಯದಲ್ಲಿ ಬದುಕಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ತಾಯಿಯ ಪಿತೃ ಕಾರ್ಯ ನೆರವೇರಿಸಲು ಸಹ ಮನೆಯಲ್ಲಿ ಹಿರಿಯರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಗೆ ನಾಮಧಾರಿ (ಈಡಿಗ) ಸಮಾಜದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮೀಜಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳ ಜೊತೆ ಸರ್ಕಾರ ನಿಲ್ಲಬೇಕು. ಹೆಚ್ಚಿನ ಪರಿಹಾರ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸ್ವಾಮೀಜಿಗಳು ಪ್ರಾರ್ಥಿಸಿದ್ದಾರೆ.
ಈ ನಡುವೆ ಅನಾಥವಾದ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದೇ ದುರಂತದಲ್ಲಿ ಹಲವು ಕುಟುಂಬಗಳ ಬದುಕು ಕತ್ತಲಾದ ಈ ಘಟನೆ ಶಿರಾಲಿ ಗ್ರಾಮದಲ್ಲಿ ನೀ..ರವ ಮೌನ ಆವರಿಸಿದೆ..

