ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಹಾಗೂ ಕಾಳಸಂತೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಮತ್ತು ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಮಾಡುವುದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೊಸ ನಿಯಮದ ಪ್ರಕಾರ, ಒಂದು ಸಿಲಿಂಡರ್ ಬುಕ್ಕಿಂಗ್ ಮಾಡಿದ ನಂತರ ಮತ್ತೊಂದು ಬುಕ್ಕಿಂಗ್ ಮಾಡಲು ಬೇಕಾದ ಕನಿಷ್ಠ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಕೆಲವೆಡೆ ಅನಾವಶ್ಯಕವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸುವ ಪ್ರವೃತ್ತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಹುತೇಕ ಗ್ರಾಹಕರು ಸುಮಾರು 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದರು. ಆದರೆ ಇತ್ತೀಚಿನ ಅಂತರರಾಷ್ಟ್ರೀಯ ಪರಿಸ್ಥಿತಿ ಹಾಗೂ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಕೆಲವು ಮಂದಿ ಕೇವಲ 15 ದಿನಗಳೊಳಗೆ ಮತ್ತೆ ಬುಕ್ಕಿಂಗ್ ಮಾಡಲು ಮುಂದಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆ ಸರ್ಕಾರ ಗ್ಯಾಸ್ ಸರಬರಾಜು ಸಮತೋಲನದಲ್ಲಿರಲು ಮತ್ತು ಎಲ್ಲ ಗ್ರಾಹಕರಿಗೂ ಸಮಯಕ್ಕೆ ಸಿಲಿಂಡರ್ ದೊರಕುವಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಜೊತೆಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

“ಮನೆ ಬಳಕೆಯ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಪೂರೈಕೆ ವ್ಯವಸ್ಥೆ ಮುಂದುವರಿಯಬೇಕು” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೊಸ ಮಾರ್ಗಸೂಚಿಗಳು ಜಾರಿಯಾದ ನಂತರ ಎಲ್‌ಪಿಜಿ ವಿತರಣೆ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನೂ ಓದಿ/ಮಾಳ್ಕೋಡ ಶಾಲೆಯ ಶತಮಾನೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ನಾಗರಾಜ ನಾಯ್ಕ ಮಾಳ್ಕೋಡ