ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ಹಣದಾಸೆಗೆದಾಗಿ ವೃದ್ಧ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪಿಗ್ಮಿ ಹಣವನ್ನು ದೋಚುವ ಉದ್ದೇಶದಿಂದ ವೃದ್ಧೆಯ ಕತ್ತು ಹಿಸುಕಿ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆ, ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.
ಸಿದ್ದಾಪುರದ ಸೊರಬಾ ರಸ್ತೆ ಭಾಗದಲ್ಲಿ ಒಂಟಿಯಾಗಿ ವಾಸವಿದ್ದ ಗೀತಾ ಹುಂಡೇಕರ್ (75) ಎಂಬವರು ಪಿಗ್ಮಿ ಸಂಗ್ರಹದ ಮೂಲಕ ಜೀವನ ಸಾಗಿಸುತ್ತಿದ್ದರು. ಹಣಕಾಸು ಸಂಸ್ಥೆಯೊಂದರ ಪರವಾಗಿ ಮನೆಮನೆಗೆ ತೆರಳಿ ಪಿಗ್ಮಿ ಸಂಗ್ರಹಿಸುತ್ತಿದ್ದ ಅವರು, ಅದರಿಂದ ಬಂದ ಆದಾಯದಿಂದಲೇ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ವಯಸ್ಸಿನ ಅಡ್ಡಿಯಿಲ್ಲದೆ ದಿನವೂ ಸಿದ್ದಾಪುರದ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಅವರು ಎಲ್ಲರೊಂದಿಗೆ ಆತ್ಮೀಯವಾಗಿದ್ದರು.
ಈ ವೃದ್ಧೆಯ ಬಳಿ ಹಣ ಇರುತ್ತದೆ ಎಂಬ ಮಾಹಿತಿ ಪಡೆದ ಆರೋಪಿ ಲಾಭದಾಸೆಯಿಂದ ಅಪರಾಧಕ್ಕೆ ಮುಂದಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. 2024ರ ಡಿಸೆಂಬರ್ ಅಂತ್ಯದಲ್ಲಿ ರಾತ್ರಿ ವೇಳೆಯಲ್ಲಿ ಮನೆಯೊಳಗೆ ನುಗ್ಗಿದ ಆರೋಪಿಯು ವೃದ್ಧೆಯ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಕಿವಿಯೋಲೆ ಸೇರಿದಂತೆ ಕೆಲ ಆಭರಣಗಳು ಹಾಗೂ ಪಿಗ್ಮಿ ಸಂಗ್ರಹಿಸಿದ್ದ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ.
ವೃದ್ಧೆಯ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದರು. ವಿವಿಧ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರಿ ಅಭಿಯೋಜಕರ ವಾದ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ದಂಡ ವಿಧಿಸಿ, ಸಂತ್ರಸ್ತೆಯ ಪುತ್ರಿಯರಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶೀಘ್ರ ವಿಚಾರಣೆ ನಡೆದು ಕಡಿಮೆ ಅವಧಿಯಲ್ಲೇ ತೀರ್ಪು ಪ್ರಕಟವಾಗಿದೆ.
ಇದನ್ನೂ ಓದಿ/ಹಳಿಯಾಳ–ಯಲ್ಲಾಪುರ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಆನೆ ಕಂಡು ಓಡಿದ ವಾಹನ ಸವಾರರು





