ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅಕ್ಟೋಬರ್ ತಿಂಗಳು ಅಂತ್ಯವಾದರೂ ವರುಣನ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆ ರೈತರನ್ನ ಕಂಗಾಲಾಗುವಂತೆಮಾಡಿದೆ. ಮೇ ತಿಂಗಳಲ್ಲಿ ಆರಂಭವಾದ ಮಳೆ ಐದು ತಿಂಗಳು ಕಳೆದರೂ ನಿಲ್ಲದಿರುವುದರಿಂದ ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ಸಾಲ ಮಾಡಿಬೆಳೆದ ರೈತರು ಈಗ ಆತಂಕದಲ್ಲಿದ್ದಾರೆ. ಬಹುತೇಕ ಹೊಲಗಳಲ್ಲಿ ಬೆಳೆದಿದ್ದ ಭತ್ತದ ಬೆಳೆಗಳು ಮಳೆನೀರಿನಲ್ಲಿ ಮುಳುಗಿ ಹೋಗಿದೆ, ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದೆ ರೈತರು ಕಣ್ಣೀರು ಹಾಕುವಂತಾಗಿದೆ. ಇನ್ನೂ ತಗ್ಗು ಪ್ರದೇಶದಲ್ಲಿನ ಜಮೀನುಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ಬೆಳೆದ ಸಂಪೂರ್ಣ ಬೆಳೆ ನೀರಿಲ್ಲಿ ಮುಳುಗಡೆಯಾಗಿದ್ದು, ಮಳೆ ನಿಂತರು ಸಹ ಬೆಳೆದ ಭತ್ತದ ಬೆಳೆ ಕೈಗೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.
ನಿರಂತರ ಮಳೆಯಿಂದ ಕೇವಲ ರೈತರಷ್ಟೆ ಅಲ್ಲದೆ , ಸಾಮಾನ್ಯ ಜನರೂ ಸಹ ಮಳೆ ರಗಳೆಯಿಂದಾಗಿ ತತ್ತರಿಸಿಹೋಗಿದ್ದಾರೆ.ವಿಪರೀತ ಮಳೆಯಿಂದಾಗಿ ರಾಜ್ಯ ಹೆದ್ದಾರಿಗಳು ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಕಿತ್ತುಹೋಗಿದೆ. ಬಹುತೇಕ ನದಿ-ಹಳ್ಳಗಳು ಸಹ ನಿರಂತಮಳೆಯಿಂದಾಗಿ ಇಂದಿಗೂ ತುಂಬಿ ಹರಿಯುತ್ತಿದೆ. ಈಗಾಗಲೇ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಬೇಕಾದ ಈ ದಿನದಲ್ಲಿ ಇನ್ನೂ ಮಳೆಗಾಲವೆ ನಿಂತಿಲ್ಲ. ವಾತಾವರಣ ಏರುಪೇರಾಗುತ್ತಿರುವ ಕಾರಣ ಜನರ ಆರೋಗ್ಯದಲ್ಲಿಯೂ ಸಹ ಸಮಸ್ಯೆ ಎದುರಾಗುತ್ತಿದೆ.
ಇನ್ನೂ ಕೂಡ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಅಂತಾ ಹವಮಾನ ಇಲಾಖೆ ಮಾಹಿತಿ ನೀಡುತ್ತಲೆ. ಇದೆ. ಇದೇ ಪರಿಸ್ಥಿತಿ ಮುಂದುವರೆದಲ್ಲೆ ನಿತ್ಯದ ತರಕಾರಿ, ಬೆಳೆಕಾಳು ಸೇರಿದಂತೆ ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಈಗಾಗಲೇ ಇರುಳ್ಳಿ ಸೇರಿದಂತೆ ಒಂದಿಷ್ಟು ಸಾಮಗ್ರಿಗಳ ಬೆಲೆ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ರೈತರು ಬೆಳೆದ ಬೆಳೆ ಕಾಳು ತರಕಾರಿ ಎಲ್ಲವೂ ಈ ಭಾರೀ ಮಳೆ ನುಂಗಿ ಹಾಕಿದೆ. ಸರ್ಕಾರದಿಂದ ತಕ್ಷಣ ಪರಿಹಾರ ಕ್ರಮ ಹಾಗೂ ಬೆಳೆ ಹಾನಿ ಅಂದಾಜು ಪ್ರಕ್ರಿಯೆ ಆರಂಭಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.

 
							
 
			 
			 
			 
			
