ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕೆ.ಡಿ.ಸಿ.ಸಿ. ಬ್ಯಾಂಕ್ನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಗೂ ನಿರ್ದೇಶಕಿಯಾಗಲು ಅವಕಾಶ ಸಿಗದೇ ಇರುವುದರಿಂದ ಮಹಿಳಾ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಫರ್ಧಿಸಿದ್ದೇನೆಯೇ ಹೊರತು ಯಾವುದೇ ವ್ಯಕ್ತಿ ಅಥವಾ ಬಣದ ಪ್ರತಿನಿಧಿಯಾಗಿ ಅಲ್ಲ ಎಂದು ಸಹಕಾರಿ ಸರಸ್ವತಿ ಎನ್. ರವಿ ಸ್ಪಷ್ಟಪಡಿಸಿದರು.
ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ನಾನು ಬಣಗಳ ಪ್ರತಿನಿಧಿಯಾಗಿ ಸ್ಫರ್ಧಿಸಿದ್ದೇನೆ, ಸಂದರ್ಭ ನೋಡಿ ನಾಮಪತ್ರ ಹಿಂಪಡೆಯುತ್ತೇನೆ ಎಂದು ಸಹಕಾರಿ ಮತದಾರರಿಗೆ ತಪ್ಪು ಸಂದೇಶ ನೀಡುತ್ತಿರುವುದು, ಅನಾವಶ್ಯಕ ಅಪಪ್ರಚಾರ ಮಾಡುತ್ತಿರುವುದು ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನವಾಗಿರುತ್ತದೆ. ನಾನು ಮಹಿಳಾ ಪ್ರಾತಿನಿಧ್ಯ, ಎಲ್ಲಾ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕೆಂಬ ಸಾಮಾಜಿಕ ನ್ಯಾಯಕ್ಕಾಗಿ ಚುನಾವಣೆಗೆ ಸ್ಫರ್ಧಿಸಿದ್ದೇನೆಯೇ ಹೊರತು ಯಾರದೇ ಒತ್ತಡ ಅಥವಾ ಆಮಿಷಕ್ಕೆ ಒಳಗಾಗಿಲ್ಲ ಎಂದು ಹೇಳಿದರಲ್ಲದೇ ಸ್ಫರ್ಧೆಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸ್ಕೊಡ್ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕಿಯಾಗಿ, ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸಂಸ್ಥಾಪಕ ನಿರ್ದೇಶಕಿಯಾಗಿ, ಶಿರಸಿಯ ರೋಟರಿ ಸಂಸ್ಥೆಯ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಸ್ಕೊಡ್ವೆಸ್ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿಯಾಗಿ, ಶಾಲ್ಮಲಾ ಅಗ್ರೋ ಫೇರ್ ಎಂಡ್ ಇಲೈಟ್ ಸರ್ವಿಸಸ್ ಪ್ರೈವೇಟ್ ಲಿ. ಕಂಪನಿಯ ನಿರ್ದೇಶಕಿಯಾಗಿ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಸ್ಥೆಗಳ ಸದಸ್ಯಳಾಗಿ ಕಾರ್ಯನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿದ್ದೇನೆ.
ನನಗೆ ಯಾವುದೇ ಬಣದ ಸಹಕಾರವಿಲ್ಲ ಎಂಬ ಯಾವುದೇ ಭಯವಿಲ್ಲ ಮತ್ತು ಯಾವುದೇ ಬಣದ ವಿರುದ್ಧದ ಸ್ಫರ್ಧೆಯೂ ನನ್ನದಲ್ಲ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆಯಾಗಬೇಕು ಎಂಬುದು ನನ್ನ ಆಶಯ ಎಂದರು.ಜಿಲ್ಲೆಯ ಸಹಕಾರಿಗಳಿಗೆ ರಾಜ್ಯದಲ್ಲಿಯೇ ವಿಶೇಷ ಗೌರವವಿದೆ. ಯಾವುದೇ ಸಂದರ್ಭದಲ್ಲೂ ಆಸೆ, ಆಮಿಷಗಳಿಗೆ ಮರುಳಾಗಿ ತಾವು ಪ್ರತಿನಿಧಿಸುವ ಸಂಸ್ಥೆಗಳಿಗೆ ದ್ರೋಹ ಬಗೆಯುವುದಿಲ್ಲ. ಸಹಕಾರಿ ಮತದಾರರು ಬುದ್ಧಿವಂತ ಸುಸಂಸ್ಕೃತರು. 105 ವರ್ಷಗಳಲ್ಲಿ ಪ್ರಥಮ ಬಾರಿಗೆ ಕೆ.ಡಿ.ಸಿ.ಸಿ. ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿರುವ ನನ್ನ ಅನುಭವ ಮತ್ತು ಸಾಮರ್ಥ್ಯವನ್ನು ನೋಡಿ ಮತದಾನ ಮಾಡುತ್ತಾರೆ ಎಂಬ ನಂಬಿಗೆ ನನಗಿದೆ.
ಚುನಾವಣೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ. ದಯವಿಟ್ಟು ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನ್ನ ಹೋರಾಟಕ್ಕೆ ಎಲ್ಲಾ ಸಹಕಾರಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೇಮಲತಾ ಚೌಗುಲೆ, ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ, ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ, ರೇಖಾ ನಾಯ್ಕ ಹಾಗೂ ಮಾನಸ ಹೆಗಡೆ ಉಪಸ್ಥಿತರಿದ್ದರು.
ಇದನ್ನೂ ಓದಿ / ಕಾಳಿ ನದಿಗೆ ಸೇತುವೆ ಮಂಜೂರಿಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರೂಪಾಲಿ ನಾಯ್ಕ