ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ಓರ್ವನಿಗೆ ಶಿಕ್ಷಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಎರಡನೇ ತರಗತಿ ಓದುತ್ತಿರುವ ಬಾಲಕನಿಗೆ ಸರಿಯಾಗಿ ಬರೆಯುವುದಿಲ್ಲ, ಕಲಿಸಿದ ಪಾಠವನ್ನು ಮನನ ಮಾಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಭಾರತಿ ನಾಯ್ಕ ಎಂಬುವವರು ಕೋಲಿನಿಂದ ಹೊಡೆದಿದ್ದಾರೆ. ಪರಿಣಾಮವಾಗಿ ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು ಮೂಡಿವೆ.

ಶಾಲೆ ಮುಗಿಸಿ ಮನೆಗೆ ಬಂದ ಬಾಲಕ ನೋವು ತಡೆದುಕೊಳ್ಳಲಾರದೇ ಪಾಲಕರ ಬಳಿ ಹೇಳಿಕೊಂಡಿದ್ದಾನೆ, ಮನೆಯವರು ಅವನ ಬೆನ್ನನ್ನು ನೋಡಿ ಬಾಸುಂಡೆಗಳಿರುವುದು ಗಮನಿಸಿದ್ದಾರೆ. ತಾಯಿ ಗ್ರಾಮದ ಪ್ರಮುಖರಲ್ಲಿ ಮಗನ ಸ್ಥಿತಿ ತೋರಿಸಿ ಕಣ್ಣೀರಿಟ್ಟಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಯ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿದ್ದಾರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಕಿ ಭಾರತಿ ನಾಯ್ಕ“ಉದ್ದೇಶಪೂರ್ವಕವಾಗಿ ಹೊಡೆದಿಲ್ಲ, ತಪ್ಪಾಗಿದೆ, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಕ್ಷಮೆ ಕೇಳಿದ್ದಾರೆ. ಬಿಇಒ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇನ್ನೂ ಈ ಬಗ್ಗೆ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ಶಿಕ್ಷಕಿಯ ವಿರುದ್ಧ ಕ್ರಮ‌ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ.

ಬಾಲಕನನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ: ಅಧಿಕಾರಿ ದುರುಪಯೋಗ : ಸಂಜು ನಾಯಕ ವಜಾ