ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಕಾಮಿಡಿ ಕಿಲಾಡಿ’ ಶೋ ಮೂಲಕ ಜನರನ್ನು ನಕ್ಕು ನಲಿಸಿದ್ದ ಚಂದ್ರಶೇಖರ್ ಸಿದ್ಧಿ ಅವರ ಮಾನಸಿಕ ಆರೋಗ್ಯ ಹದಗೆಟ್ಟಿದ್ದು, ಇದೇ ನೋವಿನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಂದ್ರಶೇಖರ್ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರಾಗಿದ್ದರು. ಇಲ್ಲಿನ ತೆಲಂಗಾರ್ ಬಳಿಯ ಚಿಮ್ನಳ್ಳಿಯಲ್ಲಿ ವಾಸವಾಗಿದ್ದ ಅವರ ಪ್ರತಿಭೆಗೆ ಕಾಮಿಡಿ ಕಿಲಾಡಿಯಲ್ಲಿ ಸೂಕ್ತ ವೇದಿಕೆ ಸಿಕ್ಕಿತ್ತು. ನವಿರಾದ ಹಾಸ್ಯದ ಮೂಲಕ ಚಂದ್ರಶೇಖರ ಸಿದ್ದಿ ಜನರ ಮನ ಗೆದ್ದಿದ್ದರು.
ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಯ ಮುಖ್ಯ ಪರದೆಯಲ್ಲಿ ಮಿಂಚಿದ ನಂತರ ಅವರಿಗೆ ಇನ್ನಷ್ಟು ಅವಕಾಶಗಳು ಅರೆಸಿಬಂದಿದ್ದು, ಕೆಲ ಧಾರಾವಾಹಿಗಳಲ್ಲಿ ಸಹ ಪಾತ್ರ ನಿಭಾಯಿಸಿದ್ದರು. ಸ್ಥಳೀಯವಾಗಿ ಸಹ ಉತ್ತಮ ಕಲಾವಿದರಾಗಿ ಚಂದ್ರಶೇಖರ ಸಿದ್ದಿ ಗುರುತಿಸಿಕೊಂಡಿದ್ದರು.
ಅದಾದ ನಂತರ ಪರದೆಯ ಹಿಂದೆ ಸರಿದ ಚಂದ್ರಶೇಖರ ಸಿದ್ದಿ ಊರ ಕಡೆ ಕೃಷಿ ಕೆಲಸ ಮಾಡಿಕೊಂಡಿದ್ದರು. ಉತ್ತಮ ಯೋಗಪಟುವಾಗಿದ್ದ ಅವರು ಕೂಲಿ ಕೆಲಸದಲ್ಲಿಯೂ ಮುಂದಿದ್ದರು. ತೇಲಂಗಾರಿನ ಮೈತ್ರಿ ಕಲಾ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿ ಸೇವೆ ಸಲ್ಲಿಸುತ್ತಿದ್ದರು.
ನಟನೆಯಲ್ಲಿ ಉತ್ತಮ ಭವಿಷ್ಯದ ಕನಸು ಕಂಡಿದ್ದ ಅವರು ಕಳೆದ ಕೆಲ ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿದ್ದರು. ಸಣ್ಣಪುಟ್ಟ ಪಾತ್ರ ಅಭಿನಯನದ ಅವಕಾಶ ಸಿಕ್ಕರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಶುಕ್ರವಾರ ದಿಢೀರ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ಹೊರಬಿದ್ದಿಲ್ಲ.
ಇದನ್ನೂ :Rape case/ಅತ್ಯಾಚಾರ ಪ್ರಕರಣ : ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಕೋರ್ಟ್ ತೀರ್ಪು