ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ರಾಮನಗುಳಿ ಸಮೀಪ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿಟ್ಟ ಕಾರಲ್ಲಿ 1,14.999,500 ರೂಪಾಯಿ ಪತ್ತೆಯಾಗಿದ್ದು, ಅಪಹರಣ ಮಾಡಿಕೊಂಡು ಬಂದು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.
ರಾಮನಗುಳಿ ಬಳಿ ಪತ್ತೆಯಾದ ಕಾರನ್ನು ಪೊಲೀಸರು ಠಾಣೆಗೆ ತಂದು ಪರಿಶೀಲನೆ ನಡೆಸಿದಾಗ ಸೀಟ್ ಕೆಳಭಾಗದಲ್ಲಿ ಪ್ರತ್ಯೇಕವಾದ ಬಾಕ್ಸ್ ಒಂದರಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಕಾರ ಸೀಟ್ ಕೆಳಭಾಗದಲ್ಲಿ ಪ್ರತ್ಯೇಕವಾದ ಬಾಕ್ಸ್ ಮಾಡಿಕೊಂಡಿರುವುದನ್ನು ಗಮನಿಸಿದರೆ ಈ ರೀತಿಯಾಗಿ ಹಣಸಾಗಾಟ ಮಾಡುವುದಕ್ಕಾಗಿಯೇ ಮೊದಲಿನಿಂದಲು ಈ ಕಾರು ಬಳಸಲಾಗುತ್ತಿತ್ತು ಎನ್ನುವುದು ಪೊಲೀಸರ ತನಿಖೆಯ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ. ಆ ರೀತಿ ಇಲ್ಲವಾಗಿದ್ದರೆ ಕಾರಿನ ಸೀಟ್ ಕೆಳಭಾಗದಲ್ಲಿ ಪ್ರತ್ಯೇಕವಾದ ಬಾಕ್ಸ್ ಯಾಕೆ ಮಾಡಿಕೊಂಡಿದ್ದರು ಎನ್ನುವ ಚರ್ಚೆ ನಡೆಯುತ್ತಿದೆ.
ಹೀಗಾಗಿ ಈ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿರುವ ಬಗ್ಗೆ ಬೇರೆ ಯಾರಿಗಾದರೂ ಅದರ ಸುಳಿವು ಸಿಕ್ಕಿ ಬೇರೆ ಯಾವುದೋ ಒಂದು ತಂಡ ಈ ಕಾರನ್ನು ಅಪಹರಣ ಮಾಡಿಕೊಂಡು ಬಂದಿರುವ ಅನುಮಾನ ಸಹ ಇದೆ. ಒಂದು ವೇಳೆ ಇದನ್ನು ಬೇರೆ ಯಾರಾದರೂ ಹಣವಿದ್ದ ಕಾರನ್ನು ಅಪಹರಣ ಮಾಡಿಕೊಂಡು ಬಂದಿರುವುದು ಹೌದಾಗಿದಲ್ಲಿ ಆ ತಂಡಕ್ಕೆ ಕಾರು ಸೀಟ್ ಕೆಳ ಭಾಗದಲ್ಲಿ ಇಟ್ಟಿರುವ ಹಣದ ಸುಳಿವು ಸಿಗದೆ ಕಾರ್ ಸೀಟ್ ಮೇಲೆ ಎಲ್ಲಾದರೂ ಇನ್ನಷ್ಟು ಹಣ ಇಟ್ಟಿದ್ದರೆ ಅದನ್ನಷ್ಟೆ ದೋಚಿಕೊಂಡು ಹಣ ಸಿಕ್ಕ ಮೇಲೆ ನಿರ್ಜನ ಪ್ರದೇಶದಲ್ಲಿ ಕಾರು ಬಿಟ್ಟು ಹೋಗಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ನಿರ್ಜನ ಪ್ರದೇಶಲ್ಲಿ ಪತ್ತೆಯಾದ ಕಾರಿನಲ್ಲಿ ಇನ್ನೂ ಸಹ ಬೇರೆ ಬೇರೆ ಜಿಲ್ಲೆಯ ನೋಂದಣಿ ಹೊಂದಿರುವ ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಹೀಗಾಗಿ ಕಾರನ್ನು ಈ ರೀತಿಯಾದ ಅಪರಾಧ ಪ್ರಕರಣಕ್ಕೆ ಬಳಕೆ ಮಾಡಲಾಗುತ್ತಿತ್ತು ಎನ್ನುವುದು ಸಹಜವಾಗಿಯೇ ಎಲ್ಲರಿಗೂ ಗೊತ್ತಾಗುವ ವಿಚಾರ. ದಾಖಲೆ ಹೊಂದಿದ್ದ ಹಣ ಇರುವ ಕಾರು ಅಪಹರಣವಾಗಿದ್ದರೆ ಇಷ್ಟು ಹೊತ್ತಿಗಾಗಲೇ ರಾಜ್ಯದ ಬೇರೆ ಯಾವುದಾದರು ಒಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರಬೇಕಿತ್ತು. ಸದ್ಯದ ಮಾಹಿತಿ ಪ್ರಕಾರ ಎಲ್ಲಿಯೂ ಸಹ ಪ್ರಕರಣ ದಾಖಲಾದ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಸಿಕ್ಕಿರುವ ಕೋಟಿ ಹಣದ ಹಿಂದೆ ಹತ್ತಾರು ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಪೊಲೀಸರ ಸಮಗ್ರ ತನಿಖೆ ನಂತರದಲ್ಲಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕಾರಿನಲ್ಲಿದ್ದ ಕೋಟಿ ಹಣದ ಅಸಲಿಯತ್ತು ಗೊತ್ತಾಗಬೇಕಿದೆ.
ಇದನ್ನೂ ಓದಿ