suddibindu.in
ಹೊನ್ನಾವರ :ಹತ್ತು ವರ್ಷಗಳಲ್ಲಿ ಬೊಗಳೆ ಭಾಷಣ ಬಿಟ್ಟರೆ (BJP)ಬಿಜೆಪಿಗರು ಬೇರೇನನ್ನೂ ಮಾಡಿಲ್ಲ.ಧರ್ಮ, ಜಾತಿ, ಭಾಷೆ ಎನ್ನುವ ಬಿಜೆಪಿ ಬೇಕಾ,ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕಾಂಗ್ರೆಸ್ (Congress) ಬೇಕಾ ಎಂಬುದನ್ನ ಮತದಾರರು ನಿರ್ಧರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B K Hariprasad) ಹೇಳಿದರು.
ಕೆಳಗಿನೂರು ಒಕ್ಕಲಿಗರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಂಕಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಸಾರ್ವಜನಿಕ ಕ್ಷೇತ್ರದಲ್ಲಿ ಪವಿತ್ರ ಗ್ರಂಥ. ಅಂಥ ಸಂವಿಧಾನ ಬದಲಾವಣೆ ಮಾಡಲು ಹೊರಟ ಅನಂತಕುಮಾರ್ ಹೆಗಡೆಯವರೇ ಬದಲಾವಣೆಯಾದರು.ಕಣ್ಣೊರೆಸಲು ಅನಂತಕುಮಾರ್ ಹೆಗಡೆಯವರನ್ನ (Ananthkumar Hegde) ಬಿಜೆಪಿ ಬದಲಿಸಿದೆ.ಆದರೆ ನಿರಂತರವಾಗಿ ಬಿಜೆಪಿಯಿಂದ ಸಂವಿಧಾನವನ್ನ ಅವಹೇಳನ ಮಾಡಲಾಗುತ್ತಿದೆ. ಪೂರ್ವಜನರಿಗೆ ಗೌರವ ತರಲು ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದರು.
ಇದನ್ನೂ ಓದಿ
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
ಬಡವರಿಗೆ ಹಾಕೋಕೆ ಬಟ್ಟೆ ಇರಲ್ಲ. ಆದರೆ ಮಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರು ಯಾವ ಫ್ಯಾನ್ಸಿ ಡ್ರೆಸ್ ಹಾಕೊಂಡು ಬರುತ್ತಾರೋ ಗೊತ್ತಿಲ್ಲ. ಅವರು ಫಿಲ್ಮಿ ಡೈಲಾಗ್ಗೇನು ಕಡಿಮೆ ಇಲ್ಲ. ಅವರ ಅಮೃತಕಾಲ ಸಂಪೂರ್ಣ ಬರ್ಬಾದ್ ಆಗಿದೆ. ಅತ್ಯಾಚಾರ ಸಂತ್ರಸ್ತರಿಗೂ ಮಾಲೆ ಹಾಕಿ ಸಿಹಿ ನೀಡಿ ಸಂಭ್ರಮಿಸುವವರು ಬಿಜೆಪಿಗರು. ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಾಗಿ ಭಾಗಿಯಾಗುವವರೇ ಬಿಜೆಪಿಗರು. ಕೋವಿಡ್ನಲ್ಲಿ 40ಲಕ್ಷ ಜನ ಸತ್ತರೂ ಮನೆಯಿಂದ ಹೊರಬಾರದ ನರೇಂದ್ರ ಮೋದಿ, ನವಿಲಿಗೆ ಊಟ ತಿನ್ನಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ (R V Deshpande,) ಮಾತನಾಡಿ, ಈಗ ನಡೆಯುತ್ತಿರುವ ಚುನಾವಣೆಗೆ ಕಾರಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್.(Dr. Baba Saheb Ambedkar,) ಚುನಾವಣೆ ಪ್ರಜಾಪ್ರಭುತ್ವದ ಅಂಗ. ಸಂವಿಧಾನದ ಆಧಾರದ ಮೇಲೆ ಆರು ಬಾರಿ ಸಂಸದರಾದವರು ಅದೇ ಸಂವಿಧಾನ ಬದಲು ಮಾಡಲು ೪೦೦ ಸ್ಥಾನ ಕೊಡಿ ಎನ್ನುವವರು ಬಿಜೆಪಿಗರು. ಪ್ರಜಾಪ್ರಭುತ್ವವಿದ್ದರೆ ಅಭಿವೃದ್ಧಿ, ಪ್ರಗತಿ ಸಾಧ್ಯ. ಡಿಕ್ಟೇಟರ್ಶಿಪ್ ಬಂದರೆ ದೇಶದ ಪ್ರಜಾಪ್ರಭುತ್ವಕ್ಕೆ ಕಷ್ಟವಿದೆ ಎಂದರು.
ಬಡವರ,ರೈತರ, ಮಹಿಳೆಯರ, ಹಿಂದುಳಿದ ಜನಾಂಗಕ್ಕೆ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್. ಚುನಾವಣೆಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಜೆಪಿಗರು ಆಕಾಶ ತೋರಿಸಿದ್ದಾರೆ. ೧೦ ವರ್ಷದಿಂದ ಪ್ರಧಾನಿಯಾಗಿದ್ದವರು ಏನು ಕೊಡುಗೆ ನೀಡಿದ್ದಾರೆ? ನಿರುದ್ಯೋಗ, ಬೆಲೆ ಏರಿಕೆ, ಜಾತೀಯತೆ ಅಷ್ಟೇ ಅವರ ಕೊಡುಗೆ. ರಾಷ್ಟ್ರದ, ರಾಷ್ಟ್ರದ ಜನರ ಹಿತದ ರಕ್ಷಣೆ ಕೇವಲ ಕಾಂಗ್ರೆಸ್ ಅಥವಾ ಇಂಡಿಯಾ ಘಟಬಂಧನದಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸುಳ್ಳು ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ.ಈಗ ಚುನಾವಣೆಗೆ ಮತ್ತೆ ಯಾವುದಾದರೂ ಸುಳ್ಳು ಇಟ್ಟುಕೊಂಡು ಬರುತ್ತಾರೆ.ಬಿಜೆಪಿ ಅಭ್ಯರ್ಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಚುನಾವಣೆ ಬರುತ್ತಿದ್ದಂತೆ ಬಿಜೆಪಿಗರು ಪಾದಯಾತ್ರೆಯನ್ನೂ ಮಾಡಿದರು. ಆದರೆ ಆ ಪಾದಯಾತ್ರೆ ಮಾಡಿದ್ದ ಪುಣ್ಯಾತ್ಮ ಈಗೆಲ್ಲಿದ್ದಾರೆ ಗೊತ್ತಿಲ್ಲ. ಬಿಜೆಪಿಗರು ತಮ್ಮ ಆಡಳಿತದಲ್ಲಿ ಏನು ಮಾಡಿದ್ದಾರೆಂಬುದನ್ನ ತೋರಿಸಲಿ. ೪೦% ಕಮಿಷನ್ ಪಡೆದು ಲೂಟಿ ಮಾಡಿದ್ದು ಬಿಟ್ಟರೆ ಬೇರೇನನ್ನೂ ಅವರು ಮಾಡಿಲ್ಲ ಎಂದು ಜರಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಬಿಜೆಪಿ ದುರಾಡಳಿತ ಮಾಡಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಮಾಡಿಲ್ಲ. ದಿನೇ ದಿನೇ ಬೆಲೆ ಏರಿಕೆಗೆ ಕಾರಣವಾಗುತ್ತಿರುವ ಬಿಜೆಪಿಯನ್ನ ದೂರವಿಟ್ಟು ಕಾಂಗ್ರೆಸ್ಗೆ ಮತ ನೀಡಬೇಕಿದೆ. ಹಿಂದಿನ ಸಂಸದರ ಮುಖ ಎಷ್ಟು ಜನ ನೋಡಿದ್ದೀರೋ ಗೊತ್ತಿಲ್ಲ. ಒಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗದ, ಜನರ ನೋವು ಅರಿಯದ ಈಗಿನ ಬಿಜೆಪಿ ಅಭ್ಯರ್ಥಿ ಲೋಕಸಭಾ ಕ್ಷೇತ್ರವನ್ನ ಪ್ರತಿನಿಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿಕೆ ನೀಡುತ್ತಾರೆ. ಮಂಗಳೂರಿಗೆ ಬಂದಿರುವ ಪ್ರಧಾನಿ ಜೆಡಿಎಸ್ನವರ ಈ ಹೇಳಿಕೆಯನ್ನ ಸಮರ್ಥಿಸಿಕೊಳ್ಳುತ್ತಾರಾ? ಬಡವರಿಗೆ ಸಹಾಯ ಮಾಡಿದರೆ ಜೆಡಿಎಸ್- ಬಿಜೆಪಿಗರಿಗೆ ಯಾಕೆ ನೋವಾಗುತ್ತದೆ? ಕುಮಾರಸ್ವಾಮಿಯವರ ಹೇಳಿಕೆಯನ್ನ ಖಂಡಿಸುತ್ತೇನೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಮಹಿಳೆಯರಿಗೆ ಅವರ ಹೇಳಿಕೆಯಿಂದ ಅವಮಾನವಾಗಿದೆ ಎಂದರು.
ಇದು ಬಿಜೆಪಿ- ಕಾಂಗ್ರೆಸ್ ಚುನಾವಣೆಯಲ್ಲ, ನ್ಯಾಯ- ಅನ್ಯಾಯದ ಚುನಾವಣೆ. ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂಸತ್ ನಲ್ಲಿ ಕಿವಿ ಚುಚ್ಚುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಣ್ಯ ಅತಿಕ್ರಮಣದಾರರಿಗೆ ಪರಿಹಾರ, ವಾರ್ಷಿಕ ಒಂದು ಲಕ್ಷ ಮಹಿಳೆಯರಿಗೆ ಸಹಾಯಧನ, ನರೇಗಾ ಕಾರ್ಮಿಕರ ದಿನಗೂಲಿ ೪೦೦ಕ್ಕೆ ಹೆಚ್ಚಳ, ಕಿಸಾನ್ ನ್ಯಾಯ, ಯುವ ನ್ಯಾಯ ತರಲಿದ್ದೇವೆ. ಅಭ್ಯುದಯ- ಏಳ್ಗೆಗೆ ಕಾಂಗ್ರೆಸ್ಗೆ ಬೆಂಬಲಿಸಬೇಕು. ನನಗೋಸ್ಕರ ಅಲ್ಲ, ಕಾಂಗ್ರೆಸ್ಗಾಗಿಯೂ ಅಲ್ಲ, ನಿಮ್ಮ ಒಳ್ಳೆಯದಕ್ಕಾಗಿ ಕಾಂಗ್ರೆಸ್ಗೆ ಮತ ನೀಡಿ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸ್ಥಳೀಯ ಮಹಿಳಾ ಕಾರ್ಯಕರ್ತರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ತಾಲೂಕು ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಜಿಲ್ಲಾ ಕಾಂಗ್ರೆಸ್ನ ಅಣ್ಣಪ್ಪ ಗೌಡ, ಮಹಿಳಾ ಕಾಂಗ್ರೆಸ್ನ ಉಷಾ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಸಾಬ್, ವನಿತಾ ನಾಯ್ಕ, ಚಂದ್ರಶೇಖರ ಗೌಡ, ವಾಮನ್ ನಾಯ್ಕ ಇದ್ದರು.