suddibindu.in
Gokaran: ಗೋಕರ್ಣ:ಉತ್ತರ ಕನ್ನಡದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯನ್ನ ಅನೇಕರು ಒಪ್ಪುತ್ತಿಲ್ಲ. ಇನ್ನೂ ಹಲವರಿಗೆ ಬಿಜೆಪಿ (BJP) ಅಭ್ಯರ್ಥಿಯೇ ಇಷ್ಟವಿಲ್ಲ.ಹೀಗಾಗಿ ಎರಡೂ ಪಕ್ಷದವರು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ.ಈ ಬಾರಿ ಸುವರ್ಣಾವಕಾಶವಿದೆ. ಈಗಿರುವ ಕಾಂಗ್ರೆಸ್ ಪರ ಅಲೆಯನ್ನ ಮತದಾನದ ದಿನದವರೆಗೂ ಸುನಾಮಿಯಂತೆ ಕೊಂಡೊಯ್ಯಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯಕರ್ತರನ್ನ ಹುರಿದುಂಬಿಸಿದರು.
ಗೋಕರ್ಣದ ಜಿ.ಪಂ. ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿಯವರ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಮಾತನಾಡಿದ ಅವರು, ಸ್ತ್ರೀರೋಗ ತಜ್ಞೆಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಮಹಿಳೆಯರ ಕಷ್ಟವನ್ನ ಅರಿತಿದ್ದೇನೆ. ಜನ ಸೇವೆಗಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಖಾನಾಪುರದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದೆ. ಉತ್ತರಕನ್ನಡ ಕ್ಷೇತ್ರದಲ್ಲಿ ಹಲವು ಸಮುದಾಯಗಳ ಜನ ಇದ್ದಾರೆ. ಎಲ್ಲಾ ಸಮುದಾಯದ ಕಷ್ಟ- ಸುಖಗಳನ್ನೂ ನಾನು ಅರಿತಿದ್ದೇನೆ. ೧೦ ವರ್ಷಗಳ ಬಿಜೆಪಿಯ ಸುಳ್ಳು ಭರವಸೆ, ೧೦ ತಿಂಗಳ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಬಗ್ಗೆ ಜನರಿಗೆ ತಿಳಿಸುವ ಮೂಲಕ ಈ ಬಾರಿ ಕಾಂಗ್ರೆಸ್ ಗೆ ಹೆಚ್ಚಿನ ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ
- ಅನಂತಕುಮಾರ ಹೆಗಡೆ ಸೇರಿ ನಾಲ್ವರ ವಿರುದ್ಧ FIR : ಸಿಂಗಾಪುರ ಹಾರಿದ ಹೆಗಡೆ..!
- ಇಂದು ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ರಜೆ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ, ಚುನಾವಣಾ ಪೂರ್ವ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿ ತೋರಿಸಿದ್ದೇವೆ. ಅದರ ಮೇಲೇ ನಾವು ಮತ ಕೇಳಬೇಕಿದೆ. ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ತಮ್ಮದೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಈ ಅಪಪ್ರಚಾರದ ಬಗ್ಗೆಯೂ ಮಾತನಾಡಬೇಕಿದೆ. ಡಾ.ಅಂಜಲಿ ಅವರಿಗೆ ಶಕ್ತಿ ನೀಡಬೇಕಿದೆ. ಎಲ್ಲರೂ ಒಂದಾಗಿ ಕೆಲಸ ಮಾಡೋಣ, ಈ ಬಾರಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸೋಣ ಎಂದರು.

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಮಾತನಾಡಿ, ಈ ಬಾರಿ ಅವಕಾಶ ಕಳೆದುಕೊಂಡರೆ ಮತ್ತೆ ಸಿಗಲಿಕ್ಕಿಲ್ಲ. ವಿಧಾನಸಭಾ ಚುನಾವಣೆಯಲ್ಲಿನ ವ್ಯತ್ಯಾಸ ಏನೇ ಇರಬಹುದು. ಆದರೆ ದೇಶ, ರಾಜ್ಯದಲ್ಲಿ ಈಗ ಕಾಂಗ್ರೆಸ್ ಪರ ಅಲೆ ಇದೆ. ಗ್ಯಾರಂಟಿ ಯೋಜನೆಯನ್ನ ಚುನಾವಣಾ ಪೂರ್ವ ಘೋಷಣೆ ಮಾಡಿದಂತೆ ಅನುಷ್ಠಾನ ಮಾಡಿದ್ದೇವೆ. ಹೀಗಾಗಿ ಈಗ ಪ್ರಚಾರಕ್ಕೆ ತೆರಳಲು ಅಂಜಬಾರದು. ನಮ್ಮ ಕುಟುಂಬದವರೇ ಅಭ್ಯರ್ಥಿಯಾಗಿ ನಿಂತಿದ್ದಾರೆಂದು ಕಾರ್ಯಕರ್ತರು ಪ್ರಚಾರ ಮಾಡಬೇಕು ಎಂದು ಕರೆನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿ ಮಾತನಾಡಿ, ಪ್ರತಿ ಬೂತ್ ನಲ್ಲಿ ನಾವೇ ಅಭ್ಯರ್ಥಿ ಎನ್ನುವಂತೆ ಎಲ್ಲರೂ ಕೆಲಸ ಮಾಡಬೇಕಿದೆ. ಆರು ಬಾರಿ ಆಯ್ಕೆಯಾದರು ಸಂಸದ ಅನಂತಕುಮಾರ್ ಹೆಗಡೆ ಒಂದೇ ಒಂದು ಸ್ಥಳೀಯ ಕಾರ್ಯಕ್ರಮಗಳಿಗೆ ಹಾಜರಾಗಿದ್ದನ್ನ ನಾವು ನೋಡಿಲ್ಲ. ತೊರ್ಕೆ ಪಂಚಾಯತ ವ್ಯಾಪ್ತಿಯಲ್ಲಿ ಒಂದೇ ಒಂದು ಕಾಮಗಾರಿ ೩೦ ವರ್ಷಗಳಲ್ಲಿ ಬಂದಿದ್ದರೆ ನಾನು ರಾಜಕೀಯ ರಾಜೀನಾಮೆ ನೀಡುವೆ. ನಮ್ಮ ಜನರಿಗೆ ಸ್ಪಂದಿಸುವ, ಕೆಲಸ ಮಾಡುವ ಸಂಸದರು ನಮಗೆ ಬೇಕಿದೆ. ಡಾ.ಅಂಜಲಿಯವರು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗೆ ಈ ಚುನಾವಣೆ ಅಡಿಪಾಯ ಆಗಬೇಕಿದೆ. ವಾತಾವರಣ ಅಂಜಲಿಯವರ ಪರವಾಗಿದ್ದು, ನಾವೆಲ್ಲರೂ ಅವರೊಂದಿಗೆ ಕೈಜೋಡಿಸಬೇಕಿದೆ ಎಂದರು.
ಈ ವೇಳೆ ವಿವಿಧ ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳು, ಮೀನುಗಾರ ಪ್ರಮುಖರು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು.