ಸುದ್ದಿಬಿಂದು ಬ್ಯೂರೋ
ಕಾರವಾರ : ಲೋಕಸಭಾ ಚುನಾವಣೆಗೆ ಕೈ-ಕಮಲ ಭರ್ಜರಿ ಸಿದ್ಧತೆ ಶುರುಮಾಡಿದ್ದು, ಕರ್ನಾಟಕದಲ್ಲಿ ಕನಿಷ್ಠ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸಿವೆ. ಉ.ಕ. ಜಿಲ್ಲೆಯ ಲೋಕಸಭಾ ಮತಕ್ಷೇತ್ರದ ಮೇಲೆ ಇಬ್ಬರೂ ಮಹಿಳೆಯರು ಕಣ್ಣಿಟ್ಟಿದ್ದು ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಮತಕ್ಷೇತ್ರಗಳನ್ನು ಒಳಗೊಂಡಿದೆ.ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಡಾ. ಅಂಜಲಿ ನಿಂಬಾಳ್ಳರ್‌ ಲೋಕಸಭೆಗೆ ಹೋಗಲು ಮುಂದಾಗಿದ್ದಾರೆ. ಈ ಮೂಲಕ ವರ್ಷದ ಅವಧಿಯಲ್ಲಿಯೇ ಮತ್ತೊಂದು ಚುನಾವಣೆಗೆ ಹೋಗಲು ತುರುಸಿನ ತಯಾರಿ ನಡೆಸಿದ್ದಾರೆ.

ಇನ್ನೊಂದೆಡೆ ಕಾರವಾರದ ಮಾಜಿ ಶಾಸಕಿ,ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿರುವ ರೂಪಾಲಿ ನಾಯ್ಕ ಅವರು ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿರುಸಿನ ತಯಾರಿ ನಡೆಸಿದ್ದಾರೆ. ಒಟ್ಟಾರೆ, ಎರಡು ಪಕ್ಷಗಳು ಈ ಮತಕ್ಷೇತ್ರದಿಂದ ಮಹಿಳೆಯರ ಸ್ಪರ್ಧೆಗೆ ಅನುವು ಮಾಡಿಕೊಡುತ್ತದಾ? ಎಂದು ನೋಡಬೇಕಿದೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಸಚಿವ ಎಚ್ .ಕೆ.ಪಾಟೀಲ ಅವರು ಈಗಾಗಲೇ ಒಂದು ಸಭೆ ನಡೆಸಿದ್ದಾರೆ. ಅನೇಕರ ಅಭಿಪ್ರಾಯ ಸಂಗ್ರಹ ನಡೆಸಲಾಗಿದೆ.

ಉತ್ತರ ಕನ್ನಡ ಮತಕ್ಷೇತ್ರವನ್ನು ಈ ಹಿಂದೆ ಮಾರ್ಗರೆಟ್ ಆಳ್ವ ಪ್ರತಿನಿಧಿಸಿದ್ದರು. ಕೇಂದ್ರ ಸಚಿವೆಯು ಸಹಾ ಆಗಿದ್ದರು. ಇದೀಗ ಕಾಂಗ್ರೆಸ್‌ ವರಿಷ್ಠರು ಮತ್ತೊಬ್ಬ ಮಹಿಳೆಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಪರಿಗಣಿಸುತ್ತದಾ ? ಕಾದು ನೋಡಬೇಕಿದೆ.ಬೆಳಗಾವಿ ಜಿಲ್ಲೆಗೆ ಸೇರಿರುವ ಕಿತ್ತೂರು ಮತಕ್ಷೇತ್ರ ಸಹಾ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು ಅಲ್ಲಿ ಕಾಂಗ್ರೆಸ್ ಪಕ್ಷದ ಬಾಬಾ ಸಾಹೇಬ್ ಪಾಟೀಲ ಶಾಸಕರು. ಉಳಿದಂತೆ ಉತ್ತರ ಕನ್ನಡ ಮತಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ ಸುಲಭವಾಗಿ ಆಯ್ಕೆಯಾಗಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಡಾ. ಅಂಜಲಿ ನಿಂಬಾಳ್ಳ‌ರ್ ಅವರದ್ದು.