ಸುದ್ದಿಬಿಂದು ಬ್ಯೂರೋ
ಕಾರವಾರ : ನಗರದ ಸೇಂಟ್ ಮೈಕಲ್ ಶಾಲೆಯನ್ನು ಅನುದಾನ ರಹಿತ ಶಾಲೆಯನ್ನಾಗಿ ಮಾಡುತ್ತಿರುವುದಕ್ಕೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸೇಂಟ್ ಮೈಕಲ್ ಶಾಲೆಯು ಹಲವಾರು ವರ್ಷಗಳಿಂದ ಅನುದಾನಿತ ಶಾಲೆಯಾಗಿದ್ದು, ಶಾಲೆಯ ಆಡಳಿತ ಮಂಡಳಿಯು ಈ ಶಾಲೆಯನ್ನು ಅನುದಾನ ರಹಿತ ಶಾಲೆಯನ್ನಾಗಿ ಮಾಡಿ ಮಕ್ಕಳಿಂದ ಹೆಚ್ಚಿನ ಶಾಲಾ ಶುಲ್ಕವನ್ನು ವಸೂಲಿ ಮಾಡುತ್ತಿದ್ದು ಮಕ್ಕಳಿಗೆ ಅವಶ್ಯಕ ಸೌಲಭ್ಯ ನೀಡದೇ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವುದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬಿಳುತ್ತದೆ.ಕೆಲವು ದಿನಗಳ ಹಿಂದೆ ಶಾಲೆಯ ಶುಲ್ಕ ತುಂಬದೆ ಇರುವ ಮಕ್ಕಳನ್ನು ನೆಲದ ಮೇಲೆ ಕೂರಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಈ ರೀತಿ ಶಾಲಾ ಮಕ್ಕಳಿಗೆ ನೆಲದಮೇಲೆ ಕೂರಿಸುವುದು ಸರಿಯಲ್ಲ.
ಆದ್ದರಿಂದ ತಾವು ಸದರಿ ಶಾಲೆಯ ಬಗ್ಗೆ ವಿಶೇಷ ಗಮನಹರಿಸಿ ಪುನಃಈ ಶಾಲೆಯನ್ನು ಅನುದಾನಿತ ಶಾಲೆಯನ್ನಾಗಿ ಮಾಡಿ ಬಡ ಶಾಲಾ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅನುಕೂಲ ಮಾಡಿಕೊಡಲು ಕ್ರಮ ವಹಿಸಬೇಕಾಗಿದೆ.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುವುದು.ಇದಕ್ಕೆ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆಗಾರರಾಗುತ್ತಾರೆ.ಆದ್ದರಿಂದ ತಾವು ಈ ವಿಷಯದ ಬಗ್ಗೆ ವಿಶೇಷ ಗಮನಹರಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಎಚ್ಚರಿಕೆ ನೀಡಿದ್ದಾರೆ.