ಕಾರವಾರ: ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದೇನೆ. ನಾನು ಅಭಿವೃದ್ಧಿ ಪರ ಕೆಲಸ ಮಾಡಿದ್ದರಿಂದ ನಿಮ್ಮ ಮುಂದೆ ಇದ್ದೇನೆ. ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರ ನಗರದ ಸಾಯಿಕಟ್ಟಾ ಶ್ರೀ ನರಸಿಂಹ ದೇವಸ್ಥಾನದ ಹತ್ತಿರ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು.
ನಾನು ಅಭಿವೃದ್ಧಿಯ ಪರವಾಗಿ ಇರುವಂತವಳು. ಮತ್ತೂ ಸಾಧಿಸುವುದು ಸಾಕಷ್ಟಿದೆ. ಕೆಲಸ ಮಾಡಿದ್ದರೆ ಮಾತ್ರವೇ ನಿಮ್ಮ ಮುಂದೆ ಬಂದು ನಿಲ್ಲುವ ಅವಕಾಶ ಹಾಗೂ ಧೈರ್ಯವಿರುತ್ತದೆ. ಕಷ್ಟದ ಕಾಲದಲ್ಲಿ ಸಿಗದೇ ಐದು ವರ್ಷಗಳಿಗೊಮ್ಮೆ ಮುಖತೋರಿಸುವವರಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ. ಕಳೆದ ಐದು ವರ್ಷಗಳಿಂದ ನಿಮ್ಮ ನಡುವೆ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂಬ ನಂಬಿಕೆ ಇದೆ. ತಾವೆಲ್ಲರೂ ನನಗೆ ಮತ್ತೊಮ್ಮೆ ನಿಮ್ಮ ಸೇವ ಮಾಡುವ ಅವಕಾಶ ನೀಡುತ್ತೀರಿ ಎಂಬ ವಿಶ್ವಾಸ ಇದೆ ಎಂದು ಮತಯಾಚಿಸಿದರು.
ಋಷಿ ಮುನಿಗಳ ಯಜ್ಞವನ್ನು ತಡೆಯಲು ದುಷ್ಟ ಶಕ್ತಿಗಳು ಪ್ರಯತ್ನಿಸುವಂತೆ ಮೋದಿಜಿರವರ ಕಾರ್ಯಕ್ರಮ ತಡೆಯಲು ಕೆಲವರು ಪ್ರಯತ್ನಿಸಿದರು. ಅದೇ ಋಷಿ ಮುನಿಗಳಿಗೆ ದೇವಾನು ದೇವತೆಗಳ ರಕ್ಷಣೆಯ ಮೂಲಕ ಯಜ್ಞ ಸರಾಗವಾಗಿ ಸಾಗುವ ಹಾಗೆ ಮಾಡಿದಂತೆ ನಿಮ್ಮಂತಹ ಅಪಾರ ಅಭಿಮಾನಿಗಳ ಆಶೀರ್ವಾದದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕೇವಲ ಎಂಟು ದಿನಗಳ ಅವಧಿಯಲ್ಲಿ ನಾನೂ ಸೇರಿದಂತೆ ನಮ್ಮ ಜಿಲ್ಲಾ ಬಿಜೆಪಿ ತಂಡ ಕಾರ್ಯಕ್ರಮವನ್ನು ಸಂಯೋಜಿಸಿ ಅಚ್ಚುಕಟ್ಟಾಗಿ ನೆರವೇರಿಸಿದೆವು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮತದಾನದ ದಿನದಂದು ಜೈ ಭಜರಂಗಬಲಿ ಎಂದು ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಗುರುತಿಗೆ ಮತ ನೀಡಿ ಎಂದು ವಿನಂತಿಸಿದರು.
ಮುದಗಾದಲ್ಲಿ ಪ್ರಚಾರ
ಆಮದಳ್ಳಿ ಗ್ರಾಮದ ಮುದಗಾ ಸೀಬರ್ಡ್ ಕಾಲೋನಿಯಲ್ಲಿ ಪ್ರಚಾರಲ್ಲಿ ರೂಪಾಲಿ ನಾಯ್ಕ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದಾಗಿ ಪ್ರಕಟಿಸಿತ್ತು. ಆ ನಂತರ ನಡೆದ ವಿದ್ಯಮಾನಗಳು ನಿಮಗೆ ಗೊತ್ತೇ ಇದೆ. ಕಾಂಗ್ರೆಸ್ ಯಾವಾಗಲೂ ಸಮಾಜವನ್ನು ಒಡೆಯುವ, ಒಂದು ವರ್ಗವನ್ನು ತುಷ್ಟೀಕರಣ ಮಾಡುವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ನ ಈ ಸಮಾಜಘಾತುಕ ಬುದ್ಧಿಗೆ ಮತದಾರರು ಮೇ 10 ರಂದು ಸೂಕ್ತ ಉತ್ತರ ಹೇಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಕಾರವಾರ ಬಿಜೆಪಿ ನಗರಾಧ್ಯಕ್ಷ ನಾಗೇಶ ಕುರಡೇಕರ, ಕಾರವಾರ ನಗರಸಭೆ ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ, ಕಾರವಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ, ಕಾರವಾರ ಯುವ ಮೋರ್ಚಾ ತಾಲ್ಲುಕಾಧ್ಯಕ್ಷರಾದ ಶುಭಂ ಕಳಸ, ಪ್ರಮುಖರಾದ ದೇವಿದಾಸ ನಾಯ್ಕ, ದಿವ್ಯಾ ದೇವಿದಾಸ ನಾಯ್ಕ ಹಾಗೂ ಬಿಜೆಪಿ ಕಾರವಾರ ಗ್ರಾಮೀಣ ಪ್ರಭಾರಿಯಾದ ಗಜಾನನ ಗುನಗಾ, ಆಮದಳ್ಳಿ ಪಂಚಾಯತ ಉಪಾಧ್ಯಕ್ಷರಾದ ರವಿ, ಪ್ರಮುಖರಾದ ತೋಕು ಹರಿಕಂತ್ರ, ಗ್ರಾಮ ಪಂಚಾಯತ ಸದಸ್ಯರು, ಕಾರ್ಯಕರ್ತರು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.