ಕಾರವಾರ : ದೇವ ಮಾನವ ಪ್ರಧಾನಿ ನರೇಂದ್ರ ಮೋದಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಮೇ 3ಕ್ಕೆ ಆಗಮಿಸುತ್ತಿರುವುದು ಇಡಿ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕಾರವಾರ ಅಂಕೋಲಾ  ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿಕೊಂಡಿದ್ದಾರೆ.

ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ದೇಶದ ಪ್ರಧಾನಿಯೊಬ್ಬರು ಆಗಮಿಸುತ್ತಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಹಟ್ಟಿಕೇರಿಯಲ್ಲಿ ಮೇ 3ಕ್ಕೆ ಮಧ್ಯಾಹ್ನ 12 ಗಂಟೆಗೆ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನನ್ನ ಕ್ಷೇತ್ರದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇನೆ ಎಂದು ಹೇಳಿದರು.

ಜಾಗತಿಕ ನಾಯಕರಾಗಿ ಭಾರತದ ಕೀರ್ತಿಯನ್ನು ದೇಶ, ವಿದೇಶಗಳಲ್ಲಿ ಎತ್ತಿ ಹಿಡಿದ ನರೇಂದ್ರ ಮೋದಿ ನಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ನಮ್ಮ ಸುದೈವವೇ ಸರಿ. ಪ್ರಧಾನಿ ಈ ಜಿಲ್ಲೆಗೆ, ನಮ್ಮ ಕ್ಷೇತ್ರಕ್ಕೆ ಆಗಮಿಸುವುದರಿಂದ ಭವಿಷ್ಯದಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ. ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ.

ನರೇಂದ್ರ ಮೋದಿ ಅವರನ್ನು ನೋಡಬೇಕು ಅವರ ಮಾತುಗಳನ್ನು ಕೇಳಬೇಕು ಎಂದು ಜನತೆ ಉತ್ಸಾಹದಲ್ಲಿದ್ದರೂ ಅದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಈಗ ಅಂತಹ ಸುವರ್ಣ ಅವಕಾಶ ನಮಗೆ ಲಭ್ಯವಾಗಲಿದೆ. ಮೋದಿ ಅವರು ನಮ್ಮೆದುರೆ ಬಂದು ಮಾತನಾಡಲಿದ್ದಾರೆ.ನರೇಂದ್ರ ಮೋದಿ ಅಂದರೆ ಅಭಿವೃದ್ಧಿ, ನರೇಂದ್ರ ಮೋದಿ ಅಂದರೆ ಭರವಸೆ. ಅವರ ಆಗಮನದಿಂದ ಇಡಿ ಕ್ಷೇತ್ರ, ಜಿಲ್ಲೆಯಲ್ಲಿ ಹೊಸ ಉತ್ಸಾಹ, ಹೊಸ ಶಕೆ ಆರಂಭವಾಗಲಿದೆ. ನರೇಂದ್ರ ಮೋದಿ ಅವರ ಕೊಡುಗೆಗಳು ಈಗಾಗಲೆ ಈ ಕ್ಷೇತ್ರದ ಮನೆ ಮನೆಗೂ ತಲುಪಿದೆ. ಈಗ ನರೇಂದ್ರ ಮೋದಿ ಅವರೇ ಆಗಮಿಸುತ್ತಿದ್ದಾರೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷರಾದ ನಳೀನಕುಮಾರ್ ಕಟೀಲ್, ವಿಧ್ಯಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ಅನಂತಕುಮಾರ್ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್, ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ ಮುಂತಾದ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 

ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರಗಳು ಹಾಗೂ ಎಲ್ಲ ಪದಾಧಿಕಾರಿಗಳು, ಪ್ರಮುಖರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪ್ರಮುಖರು ಇದ್ದರು.