ಸುದ್ದಿಬಿಂದು ಬ್ಯೂರೋ‌ ವರದಿ
ಶಿರಸಿ : ಬ್ಯಾಂಕಿಗೆ ಭರಣ ಮಾಡಬೇಕಿದ್ದ ಸ್ಕೊಡ್ ವೆಸ್ ಸಂಸ್ಥೆಯ ಸ್ವ-ಸಹಾಯ ಸಂಘ ಹಾಗೂ ಜಂಟಿ ಬಾಧ್ಯತಾ ಗುಂಪುಗಳ ಮಹಿಳೆಯರ ಸಾಲದ ಕಂತುಗಳನ್ನು ಲಪಟಾಯಿಸಿ ಮಹಿಳೆಯರಿಗೆ ಮೋಸ ಮಾಡಿರುವ ಸಿಬ್ಬಂದಿ ಹಾಗೂ ಇತರ ಇಬ್ಬರ ಮೇಲೆ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೊಸ ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಸಂಸ್ಥೆಯ ಸ್ವ-ಸಹಾಯ ಸಂಘಗಳು ಹಾಗೂ ಜಂಟಿ ಬಾಧ್ಯತಾ ಗುಂಪುಗಳ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಬ್ಯಾಂಕುಗಳಿಂದ ಕೊಡಿಸಲಾಗಿದ್ದ ಸಾಲವನ್ನು ಮರುಪಾವತಿ ಮಾಡಿಸುವ ಜವಾಬ್ದಾರಿಯನ್ನು ಸ್ಕೊಡ್ ವೆಸ್ ಸಂಸ್ಥೆಯ ಸಿಬ್ಬಂದಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಇವರಿಗೆ ವಹಿಸಲಾಗಿತ್ತು. ಆದರೆ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಇವರು ನಿಯಮಾನುಸಾರ ಸಾಲದ ಕಂತುಗಳನ್ನು ಬ್ಯಾಂಕಿಗೆ ಭರಣ ಮಾಡುವ ಬದಲು ಪೋರ್ಜರಿ ದಾಖಲೆ ಸೃಷ್ಟಿಸಿ ಸುಮಾರು ರೂಪಾಯಿ 9,98,797 ಹಣವನ್ನು ತನ್ನ ಪತಿ ಪ್ರಭಾಕರ ಪುಟ್ಟ ಗೌಡ ಹಾಗೂ ತಮ್ಮ ಸತೀಶ ಕೆ. ಮರಾಠಿಯವರೊಂದಿಗೆ ಸೇರಿಕೊಂಡು ಲಪಟಾಯಿಸಿರುವ ಬಗ್ಗೆ ದೂರು ದಾಖಲಾಗಿದೆ.

ಆರೋಪಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ರವರನ್ನು ಕಛೇರಿಗೆ ಕರೆಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಹಾಗೂ ಗಂಡ ಪ್ರಭಾಕರ ಪುಟ್ಟ ಗೌಡ ಹಾಗೂ ತಮ್ಮ ಸತೀಶ ಕೆ. ಮರಾಠಿ ಸ್ವತಃ ಆಗಮಿಸಿ ಇವರು ತಷ್ಟೊಪ್ಪಿಗೆ ಹೇಳಿಕೆ ನೀಡಿ ಲಪಟಾಯಿಸಿದ ಹಣವನ್ನು 12.12.2024 ರ ಒಳಗಾಗಿ ಭರಿಸುವುದಾಗಿ ಲಿಖಿತ ಹೇಳಿಕೆ ನೀಡಿದ್ದರು.

ಹಣ ಭರಣ ಮಾಡಲು ನೀಡಿದ ಅವಧಿಯ ನಂತರ ಸ್ಕೊಡ್‌ವೆಸ್ ಸಂಸ್ಥೆಯ ಪ್ರತಿನಿಧಿಗಳು ದುರ್ಬಳಕೆ ಮಾಡಿದ ಹಣವನ್ನು ಬ್ಯಾಂಕಿಗೆ ಭರಿಸುವಂತೆ ಕೇಳಲು ಹೋದ ಸಂದರ್ಭದಲ್ಲಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಇವಳು ಸಂಸ್ಥೆಯ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಹೊಸ ಮಾರುಕಟ್ಟೆ ಪೋಲೀಸ್ ಠಾಣಾ ಉಪ ನಿರೀಕ್ಷಕಿ ರತ್ನಾ ಕುರಿ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ