ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ರಕ್ಷಿಸಿ ಎಂದು ಭಾಷಣ ಮಾಡುತ್ತಿದ್ದರೆ ಇತ್ತ ಬಿಜೆಪಿಗರೇ ವಿಜಯೋತ್ಸವ ನೆಪದಲ್ಲಿ ಪರಿಸರವನ್ನೇ ಮಲಿನಗೊಳಿಸಿದ ಘಟನೆ ಕುಮಟಾದಲ್ಲಿ ನಡೆದಿದೆ.

ಇಂದು (28-01-2025) ಕುಮಟಾ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಸುಮತಿ ಭಟ್, ಉಪಾಧ್ಯಕ್ಷರಾಗಿ ಉದ್ಯಮಿ ಮಹೇಶ ನಾಯ್ಕ ಇವರು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ಆಯ್ಕೆಗೆ ಕೋರ್ಟ್ ತಡೆ ನೀಡಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಇದೀಗ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಬಿಜೆಪಿಯವರು ಕುಮಟಾದ ರಥ ಬೀದಿ ಮತ್ತು ಮೂರುಕಟ್ಟೆ ಸುತ್ತಮುತ್ತ ಬೇಕಾಬಿಟ್ಟಿ ಪಟಾಕಿ ಸಿಡಿಸಿದ್ದಾರೆ. ಈಗ ಎಲ್ಲೆಡೆ ಕಸಗಳೇ ತುಂಬಿಕೊಂಡಿದ್ದು, ಪರಿಸರವೇ ಗಲೀಜಾದಂತಾಗಿದೆ.

ಪೌರಕಾರ್ಮಿಕರು ನಿತ್ಯ ಕಸಗಳನ್ನೆಲ್ಲ ಸ್ವಚ್ಛಗೊಳಿಸುವ ಮೂಲಕ ಪಟ್ಟಣವನ್ನು ಅಂದಗೊಳಿಸುತ್ತಾರೆ. ಆದರೆ ಈ ಬಿಜೆಪಿಗರು ಪಟಾಕಿ ಸಿಡಿಸಿ ಪಟ್ಟಣವನ್ನು ಕಸಮಯ ಮಾಡಿದ್ದಾರೆ. ಒಂದೆಡೆ ನರೇಂದ್ರ ಮೋದಿಯವರು “ಸ್ವಚ್ಛ ಭಾರತ್” ಅಭಿಯಾನದ ಬೆನ್ನೆಲುಬಾದ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದು ಗೌರವಿಸುತ್ತಾರೆ. ಇನ್ನೊಂದೆಡೆ ಇವರದೇ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಪಟ್ಟಣವನ್ನು ಕಸಮಯಗೊಳಿಸುತ್ತಾರೆ ಎಂದು ಕುಮಟಾದ ಅಂಗಡಿಕಾರರು ವ್ಯಂಗ್ಯವಾಡಿದ್ದಾರೆ.