ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಶಿಸ್ತಿನ ಪಾರ್ಟಿ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರು ಎನ್ನಲಾದ ಕೆಲವರು ನಿನ್ನೆ ಕುಮಟಾ ಠಾಣೆಗೆ ತೆರಳಿ ಕೆಲ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ದೂರು ನೀಡಿದ್ದು, ಈ ವಿಷಯ ಇದೀಗ ಪಾರ್ಟಿಯಲ್ಲಿ ಭಾರೀ ಚರ್ಚೆಯಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಪಕ್ಷವೊಂದರ ಹಿರಿಯ ಕಾರ್ಯಕರ್ತರೊಬ್ಬರು`ಸುದ್ದಿಬಿಂದು”ವನ್ನು ಸಂಪರ್ಕಿಸಿ ನಿನ್ನೆಯ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. “ನಮ್ಮ ಪಕ್ಷ ಇಡೀ ವಿಶ್ವದಲ್ಲೇ ಅತೀ ಶಿಸ್ತಿನ ಪಕ್ಷ ಎಂದು ಹೆಸರು ಮಾಡಿತ್ತು. ಹಿಂದೆ ನಾವೆಲ್ಲ ಯಾರದೋ ಮನೆಯಲ್ಲಿ ಕೈತುತ್ತು ತಿನ್ನುತ್ತಾ ಊರೂರು ತಿರುಗಿ ಪಕ್ಷವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಟ್ಟಿದ್ದೇವೆ. ಆದರೆ ಈಗ ನಾಯಕರೆನಿಸಿಕೊಂಡವರ ಕೆಲ ತಪ್ಪು ನಡೆಯಿಂದಾಗಿ ನಮ್ಮ ಪಕ್ಷದಲ್ಲಿ ವಲಸಿಗರೇ ತುಂಬಿ ಹೋಗಿದ್ದು, ಇವರಿಂದಾಗಿ ಇಡೀ ಪಕ್ಷವೇ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ತಾನು, ತಾನು ಎನ್ನುವುದರಿಂದ ಅಹಂಕಾರ ಬೆಳೆಯುತ್ತದೆಯೇ ಹೊರತು ಜ್ಞಾನ ಬೆಳೆಯುವುದಿಲ್ಲ. ನಮಗೆ ಪಕ್ಷ ಮತ್ತು ದೇಶ ಮುಖ್ಯವೇ ಹೊರತು ಯಾವುದೇ ವ್ಯಕ್ತಿ ಮುಖ್ಯವಲ್ಲ. ವ್ಯಕ್ತಿ ಇವತ್ತು ಬರ್ತಾನೆ, ನಾಳೆ ಬೇರೆ ಪಾರ್ಟಿಗೆ ಹೋಗ್ತಾನೆ. ಇಂತವರನ್ನು ನಂಬಿ ಕೂತರೆ ಕಾರ್ಯಕರ್ತರು ಕೋರ್ಟು ಕಚೇರಿ ಅಲೆದಾಡುತ್ತಲೇ ಇರಬೇಕಾಗುತ್ತದೆ. ಕಾರ್ಯಕರ್ತರು ತಮ್ಮ ಬುದ್ಧಿಯನ್ನು ಬೇರೆಯವರ ಕಾಲಡಿಗೆ ಇಡುವ ಮುನ್ನ ಯೋಚಿಸಬೇಕು. ಇದು ನನ್ನ ಅನುಭವದ ಮಾತು” ಎಂದು ತಿಳಿಸಿದ್ದಾರೆ.

ಈ ಮಧ್ಯೆ ಜಿಲ್ಲೆಯ ಕಾಂಗ್ರೆಸ್ಸಿಗರೊಬ್ಬರು ಸುದ್ದಿಬಿಂದು'' ಜೊತೆ ಮಾತಾಡಿದ್ದು,ಜನಪ್ರತಿನಿಧಿಯಾದವಗೆ ಸರ್ಕಾರ ಎಲ್ಲಾ ರೀತಿಯ ಸವಲತ್ತು ನೀಡುತ್ತದೆ. ಆತ ನಿವೃತ್ತನಾದರೂ ಕೈತುಂಬಾ ವೇತನ ದೊರೆಯುತ್ತದೆ. ಆದರೆ ಕಾರ್ಯಕರ್ತಗೆ ಕೋರ್ಟು ಕಚೇರಿಯ ಅಲೆದಾಟ ಮಾತ್ರ ತಪ್ಪುವುದಿಲ್ಲ. ಅದರಲ್ಲೂ ಶಿಸ್ತಿನ ಪಕ್ಷದ ಕಾರ್ಯಕರ್ತರು ತಮ್ಮ ಅರ್ಧ ಆಯಸ್ಸನ್ನು ಕೋರ್ಟು ಕಚೇರಿಯಲ್ಲೇ ಕಳೆಯುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಈ ಹಿಂದುಳಿದ ವರ್ಗದವರೆಂದರೆ ಶಿಸ್ತಿನ ಪಕ್ಷಕ್ಕೆ ಕಾಲಾಳುಗಳಿದ್ದಂತೆ. ಅವರು ಇರುವುದೇ ದುಡಿಯುವುದಕ್ಕೆ ಎಂಬ ಭಾವನೆ ಅಲ್ಲಿದೆ” ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

ನಿಜ, ಜನಪ್ರತಿನಿಧಿಯಾದವ ಕಾರ್ಯಕರ್ತರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಬೇಕು. ಅದಕ್ಕೆ ಹಿರಿಯರು “ಮುತ್ಸದ್ಧಿ ನಾಯಕರನ್ನು ಸೃಷ್ಠಿ ಮಾಡಿದರೆ ರಾಜಕಾರಣಿ ತನ್ನ ಹಿಂಬಾಲಕರನ್ನು ಸೃಷ್ಠಿ ಮಾಡುತ್ತಾನೆ” ಎಂದು ಹೇಳಿದ್ದಾರೆ. ಇದು ಕೆಲ ಜನಪ್ರತಿನಿಧಿಗಳ ಪಾಲಿಗೆ ಅಕ್ಷರಶಃ ಸತ್ಯವಾಗಿದೆ.

ಜೆಡಿಎಸ್ ಕಾರ್ಯಕರ್ತರೊಬ್ಬರು ಕುಮಟಾ ಕ್ಷೇತ್ರದ ಬಗ್ಗೆ ಅಪರೂಪದ ಮಾಹಿತಿ ನೀಡಿದ್ದು, “ದಶಕಗಳ ಹಿಂದೆ ಅಳ್ವೆದಂಡೆ ಮೀನು ಮಾರುಕಟ್ಟೆ ಬಳಿ ಒಂದು ಕಾರ್ಲ್ಯಾಂಡ್ ಕಾಮಗಾರಿ ನಡೆದಿತ್ತು. ಆಗ ಕಾಮಗಾರಿಯ ಗುತ್ತಿಗೆದಾರ ಮತ್ತು ಅಂದಿನ ಜೆಡಿಎಸ್ ಜನಪ್ರತಿನಿಧಿಯ ಮಧ್ಯೆ ಏನೋ ಜಟಾಪಟಿಯಾಗಿತ್ತು. ಆಗಲೂ ಜನಪ್ರತಿನಿಧಿ ಎನ್ನಿಸಿಕೊಂಡವ ಸ್ಥಳೀಯ ಮೀನುಗಾರ ಯುವಕರನ್ನು ಎತ್ತಿಕಟ್ಟಿ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಿದ್ದ. ನಂತರ ಆ ಮೀನುಗಾರ ಯುವಕರು ವರ್ಷಾನುಗಟ್ಟಲೇ ಕೋರ್ಟು ಕಚೇರಿ ಅಲೆದಾಡಿದರೆ ಹೊರತೂ ಜನಪ್ರತಿನಿಧಿ ಮಾತ್ರ ತನ್ನ ಹವಾನಿಯಂತ್ರಿತ ಕೊಠಡಿಯಲ್ಲಿ ಹಾಯಾಗಿಯೇ ಇದ್ದ. ಆಗ ನಾವು ಕೂಡ ಜನಪ್ರತಿನಿಧಿಯ ಪರವಾಗಿ ಹಗಲು ರಾತ್ರಿ ದುಡಿದಿದ್ದೇವೆ. ಆದರೆ ನಮಗೇನೂ ಪ್ರಯೋಜನವಾಗಿಲ್ಲ” ಎಂದು ತಿಳಿಸಿದ್ದಾರೆ.

ಇವತ್ತು ರಾಷ್ಟ್ರೀಯ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷರು ಕರಾವಳಿ ಪ್ರವಾಸದಲ್ಲಿದ್ದು, ಅವರಾದರೂ ಪಕ್ಷದ ಕಾರ್ಯಕರ್ತರಿಗೆ ತಿಳುವಳಿಕೆ ನೀಡುತ್ತಾರಾ? ಅಥವಾ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಾರಾ? ಕಾದು ನೋಡಬೇಕಿದೆ.

ಗಮನಿಸಿ