ಸುದ್ದಿಬಿಂದು ಬ್ಯೂರೋ
ಕುಮಟಾ :ಉತ್ತರಕನ್ನಡ ಜಿಲ್ಲೆಯಲ್ಲಿ ಜನರ ಜೀವ ಉಳಿಸುವ ದೃಷ್ಟಿಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಆಸ್ಪತ್ರೆ ನಿರ್ಮಾಣಕ್ಕೆ ತಕ್ಷಣ ಸರ್ಕಾರ ಹಣ ಮಂಜೂರು ಮಾಡುವಂತೆ ಒತ್ತಾಯಿಸಿ ಫೆ 5ರಿಂದ ಕುಮಟಾದಿಂದ ಭಟ್ಕಳದ ವರಗೆ ಪಾದಯಾತ್ರೆ ಮಾಡುವುದಾಗಿ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಕುಮಟಾದ ಖಾಸಗಿ ಹೊಟೇಲ್ ಒಂದರಲ್ಲಿ ಕರೆದ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ ಅವರು ಕುಮಟಾದಲ್ಲಿ ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ,ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದಲ್ಲಿ ಗುರುತಿಸಲಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು. ಕುಮಟಾದಿಂದ ಭಟ್ಕಳದ ವರೆಗೆ ಪಾದಯಾತ್ರೆ ನಡೆಸಿ,ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರಿಗೆ ಮನವಿ ನೀಡಲಾಗುವುದು. ಆಸ್ಪತ್ರೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು,
ಕುಮಟಾದಲ್ಲಿ ಈ ಹಿಂದೆಯೇ ಆಸ್ಪತ್ರೆಗೆ ಸ್ಥಳ ನಿಗದಿಯಾಗಿತ್ತು, ಆದರೆ ಯಾಕಿನ್ನೂ ಆಸ್ಪತ್ರೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು. ಜನರು ನಿಮಗೇನು ತೊಂದರೆ ಮಾಡಿದ್ದಾರೆ? ನಾವು ಏನು ಶಾಪವನ್ನು ಹೊಂದಿದ್ದೇವೆ? ಯಾಕೆ ಅಸಡ್ಡೆ ಮಾಡುತ್ತಿದ್ದೀರಿ? ಎಂದು ಸರಕಾರವನ್ನು ಕುಟುಕಿದರು.
ಬೇಡದ ಯೋಜನೆಗಳಿಗೆ 100,200 ಕೋಟಿ ಕೊಡುತ್ತಿದ್ದೀರಿ. ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಬೇಕು, ಎಲ್ಲಡಿಯಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು.ಸರಕಾರವೇ 15 ರಿಂದ 20 ಎಕರೆಯನ್ನು ಗುರುತಿಸಿ.ಉದ್ದಿಮೆದಾರರಿಗೆ ಅವುಗಳನ್ನು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರೇಗುತ್ತಿಯಲ್ಲಿ 1800ಎಕರೆ ಸರಕಾರದ ವಶದಲ್ಲಿರುವ ಜಾಗ ಇದೆ. ಅದು ಬಳಕೆ ಮಾಡಿಲ್ಲ.ಇಲ್ಲಿಯ ಯುವಕರು ಬೆಂಗಳೂರು,ಪುಣೆ, ಮುಂಬೈ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಉದ್ಯೋಗವನ್ನು ಆರಿಸಿ ಹೋಗುತ್ತಿದ್ದಾರೆ.ಅದರ ಬದಲು ಹಿರೇಗುತ್ತಿಯ ಜಾಗದಲ್ಲಿಯೇ 500ಎಕರೆಯನ್ನು ಸಾಫ್ಟ್ವೇರ್ ಪಾರ್ಕ್ ಎಂದು ಘೋಷಣೆ ಮಾಡಿ300 ಎಕರೆಯನ್ನು ಗಾರ್ಮೆಂಟ್ಸ್ ಹಬ್ಬ್ ಮಾಡಬೇಕು ಎಂದರು.ಪಕ್ಷಾತೀತವಾಗಿ ನಡೆಯುವ ಪಾದಯಾತ್ರೆ ಇದಾಗಿದ್ದು. ಇದಕ್ಕೆ ಶಿವಾನಂದ ಹೆಗಡೆ ಕಡತೋಕಾ, ಗಜಾನನ ಪೈ, ಸೂರಜ್ ನಾಯ್ಕ ಸೋನಿ, ಆರ್.ಜಿ ನಾಯ್ಕ ಹಾಗೂ ಹಲವು ಪ್ರಮುಖರನ್ನ ಆಹ್ವಾನಿಸಿದ್ದೇನೆ. ಅವರೆಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ.
ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕಾ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಸ್ಥಾಪಕ ಉಮೇಶ ಹರಿಕಾಂತ, ಟ್ರಸ್ಟಿ ಸಂತೋಷ ನಾಯ್ಕ, ಸಾಮಾಜಿಕ ಹೋರಾಟಗಾರ ಮಂಜುನಾಥ ಗುನಗಾ ಇದ್ದರು.