ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಬಿಜೆಪಿಯ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಮತ್ತೆ ಮಾತೃ ಪಕ್ಷಕ್ಕೆ ಮರಳಲಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್ ನ ಪ್ರಭಾವಿ ನಾಯಕರೊಬ್ಬರ ವಿರೋಧದಿಂದಾಗಿ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಭಾರೀ ದೊಡ್ಡ ಮಟ್ಟದಲ್ಲಿ ಅಡ್ಡಿ ಉಂಟಾಗಿದೆ ಎನ್ನಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಶಿವರಾಮ ಹೆಬ್ಬಾರ್ ಅವರು ಮರಳಿ ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಸುದ್ದಿ ಹೊರ ಬರುತ್ತಿದಂತೆ.ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಆರ್ ವಿ ದೇಶಪಾಂಡೆ ಹಾಗೂ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತೀವೃ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಹೆಬ್ಬಾರ್ ಅವರಿಗೆ ಕಾಂಗ್ರೆಸ್ ಸೇರ್ಪಡೆ ಅಲ್ಪ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ನಾಳೆ ಸೋಮವಾರ ಶಿವರಾಮ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಇಬ್ಬರೂ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆ ಇತ್ತು ಎನ್ನಲಾಗಿದೆ..
ಸಿದ್ದರಾಮಯ್ಯ ಸಹ ವಿರೋಧ
ಅಪರೇಷನ್ ಕಾಂಗ್ರೆಸ್ ಗೆ ಡಿಸಿಎಂ ಡಿ ಕೆ ಶಿವಕುಮಾರ ಮಾತ್ರ ಮುಂದಾಗಿದ್ದು, ಇದಕ್ಕೆ ಸಿ ಎಂ ಸಿದ್ದರಾಮಯ್ಯ ಅವರ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರೆ ಹೆಬ್ಬಾರ್ ಅವರನ್ನ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳದಂತೆ ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಶಾಸಕ ಮೂಲಕ ವಿರೋಧ ವ್ಯಕ್ತಪಡಿಸುವಂತೆ ಮಾಡಿದ್ದಾರೆ ಎನ್ನಲಾಗಿದೆ, ಹೀಗಾಗಿ ಜಿಲ್ಲೆಯ ಶಾಸಕರಾಗಿರುವ ಆರ್ ವಿ ದೇಶಪಾಂಡೆ, ಭೀಮಣ್ಣ ನಾಯ್ಕ ಸೇರಿ ಹಲವು ಕಾಂಗ್ರೆಸ್ ಸಿಗರು ವಿರೋಧ ಹೊರಹಾಕಿದ್ದರು.ಹೀಗಾಗಿ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಗೆ ಅಡ್ಡಿಯಾಗಿದೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡಗೆ ಎರಡು ತಿಂಗಳ ಗಡುವು
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ಮುಖಂಡರೆ ತನ್ನ ಸೋಲಿಸಲು ಪ್ರಯತ್ನಿಸಿದ್ದರು. ಅವರ ಹೆಸರನ್ನು ಕೂಡ ರಾಜ್ಯದ ಹೈಕಮಾಂಡ ಗಮನಕ್ಕೆ ತಂದಿದ್ದೇನೆ. ಆದರೂ ಅವರ ವಿರುದ್ದ ಕ್ರಮಕೈಗೊಂಡಿಲ್ಲ. ಹೀಗಾಗಿ ಅಸಮಧಾನ ಇರುವ ಬಗ್ಗೆ ಮೊನ್ನೆಯಷ್ಟೆ ಹೆಬ್ಬಾರ್ ಹೇಳಿಕೊಂಡಿದ್ದು, ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ತೀರ್ಮಾನ ಮಾಡಬೇಕಾಗಿ ಬರಬಹುದು ಎಂದು ಹೇಳಿದ್ದರು, ಈಗ ಕಾಂಗ್ರೆಸ್ ನಲ್ಲಿ ನಾಯಕರ ಅಡ್ಡಿ ಹೆಚ್ಚಾಗಿರುವುದರಿಂದ ಬಿಜೆಪಿಯಲ್ಲಿ ತನ್ನ ಸೋಲಿಸಲು ಪ್ರಯತ್ನಿಸಿರುವವರ ವಿರುದ್ಧ ಎರಡು ತಿಂಗಳ ಒಳಗಾಗಿ ಕ್ರಮತೆಗೆದುಕೊಳ್ಳುವಂತೆ ಹೈಕಮಾಂಡಗೆ ಮತ್ತೆ ಗಡುವು ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹೆಬ್ಬಾರ್ ಅವರು ಕೊಟ್ಟಿರುವ ಎರಡು ತಿಂಗಳ ಒಳಗಾಗಿ ಬಿಜೆಪಿ ಹೈಕಮಾಂಡ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ. ಮುಂದಿನ ಎರಡು ತಿಂಗಳ ಬಳಿಕ ಹೆಬ್ಬಾರ್ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.