ಬೆಂಗಳೂರು: ಶಿಕ್ಷಣ ಮತ್ತು ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವೈದ್ಯರು ತಮ್ಮ ಹೆಸರಿನ ಮುಂದೆ ‘Dr’ ಬಳಸುವಂತೆ, ಇನ್ಮುಂದೆ ರಾಜ್ಯದ ಶಿಕ್ಷಕರು ತಮ್ಮ ಹೆಸರಿನ ಪೂರ್ವದಲ್ಲಿ ‘Tr’ (Teacher – ಶಿಕ್ಷಕ) ಎಂಬ ಶೀರ್ಷಿಕೆಯನ್ನು ಹೆಮ್ಮೆಯಿಂದ ಬಳಸಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಐತಿಹಾಸಿಕ ಆದೇಶ ಹೊರಬಿದ್ದಿದ್ದು, ರಾಜ್ಯದ ಲಕ್ಷಾಂತರ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.
ವಿಶೇಷ ಗೌರವ
ಉತ್ತಮ ಸಮಾಜ ನಿರ್ಮಾಣ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ವೈಜ್ಞಾನಿಕ ಮನೋಭಾವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಶ್ರಮ ಅಪಾರ. ಈ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
‘Tr’ ಎಂಬುದು ಕೇವಲ ಎರಡು ಅಕ್ಷರಗಳಾಗಿರದೆ, ಇತರರ ಭವಿಷ್ಯ ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರಿಗೆ ಸಮಾಜ ನೀಡುವ ಮಾನ್ಯತೆ ಮತ್ತು ಅವರ ಜೀವಿತಾವಧಿಯ ಸೇವೆಯ ಪ್ರತೀಕವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರೌಢ) ಎಸ್. ಪ್ರಕಾಶ್ ಅವರು ದಿನಾಂಕ 05.09.2026 ರಂದು ಅಧಿಕೃತ ಆದೇಶ (ಸಂಖ್ಯೆ: ಇಪಿ 216 ಎಸ್ಎಲ್ಬಿ 2026) ಹೊರಡಿಸಿದ್ದು, ರಾಜ್ಯಪಾಲರ ಆಜ್ಞಾನುಸಾರ ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಶಿಕ್ಷಕರಿಗೆ ಈ ಆದೇಶದಿಂದ ವೃತ್ತಿಪರ ಮನ್ನಣೆ ದೊರೆತಂತಾಗಿದೆ.
ಇದನ್ನ ಓದಿ/ಸರ್ಕಾರಿ ಪಿಯು ಕಾಲೇಜುಗಳಲ್ಲಿ 216 ಪ್ರಾಂಶುಪಾಲರ ಹುದ್ದೆ ಖಾಲಿ: ಸೆ.7ರಿಂದ ಅರ್ಜಿ ಆರಂಭ!

