ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: 60 (ಸಿಕ್ಸ್ಟಿ) ಎಂಎಲ್ಗೆ ಶುರುವಾದ ಮಾತಿನ ಚಕಮಕಿ, ಬಾಟಲಿ ಬೀಸುವ ಹಂತಕ್ಕೆ ತಲುಪಿದ ಘಟನೆ ಕುಮಟಾದ ವರದಾ ಹೋಟೆಲ್ನಲ್ಲಿ ನಡೆದಿದೆ.
ಸೆ.4ರಂದು ಸಂಜೆ 4.15ರ ಸುಮಾರಿಗೆ ಮಾಸೂರ ಕ್ರಾಸ್ನ ಜನತಾ ಪ್ಲಾಟ್ ನಿವಾಸಿ ಗುರುದತ್ತ ಜಿ. ಪಟಗಾರ (30) ಹೋಟೆಲ್ಗೆ ತೆರಳಿ ಮತ್ತೊಂದು 60ಎಂಎಲ್ ಮದ್ಯ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ಆದರೆ ‘ಇನ್ನು ಕೊಡಲು ಸಾಧ್ಯವಿಲ್ಲ’ ಎಂಬ ಸಿಬ್ಬಂದಿಯ ಉತ್ತರ ಕೇಳುತ್ತಿದ್ದಂತೆ ಪರಿಸ್ಥಿತಿ ಬದಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೊದಲು ಮಾತಿಗೆ ಮಾತು ಬೆಳೆದಿದ್ದು, ಬಳಿಕ ಕ್ಯಾಶಿಯರ್ ದರ್ಶನ ನಾಯ್ಕ ಅವರೊಂದಿಗೆ ಆರೋಪಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಹೋಟೆಲ್ ಕ್ಯಾಪ್ಟನ್ ರಾಘವ ಕೃಷ್ಣಯ್ಯ ನಾಯ್ಕ (41) ಮಧ್ಯಪ್ರವೇಶಿಸಿ ಪ್ರಶ್ನಿಸಿದಾಗ, ಕೋಪಗೊಂಡ ಆರೋಪಿ ಕೌಂಟರ್ ಮೇಲಿದ್ದ ಸೆವನ್ ಅಪ್ ಬಾಟಲಿಯನ್ನೇ ‘ಆಯುಧ’ ಮಾಡಿಕೊಂಡು ಬೀಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಟಲಿ ರಾಘವ ಅವರ ಬಲಗೈಗೆ ತಾಗಿ ಗಾಯವಾಗಿದೆ ಎನ್ನಲಾಗಿದೆ.
ಇಷ್ಟಕ್ಕೇ ನಿಲ್ಲದ ಆರೋಪಿ ದರ್ಶನ ನಾಯ್ಕ ಅವರ ಮೇಲೂ ಬಿಯರ್ ಬಾಟಲಿ ತೋರಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹೋಟೆಲ್ನ ಗ್ಲಾಸ್ಗಳನ್ನು ಒಡೆದು ಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ, ‘ಇನ್ನೊಂದು 60 ಬೇಡಿಕೆ ಈಡೇರದಿದ್ದಕ್ಕೆ ಶುರುವಾದ ಕಿರಿಕ್, ಬಾಟಲಿ ಬೀಸುವ ಮಟ್ಟಕ್ಕೆ ಹೋಗಿದೆ!
ಘಟನೆ ಸಂಬಂಧ ರಾಘವ ನಾಯ್ಕ ನೀಡಿದ ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

