ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ಸಚಿವ ಸ್ಥಾನ ಕೈತಪ್ಪಿದರೂ ರಾಜಕೀಯ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕದೆ, ಬದಲಾಗಿ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ಅಲಂಕರಿಸಿರುವ ಮಂಕಾಳು ವೈದ್ಯ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಉತ್ತರಕನ್ನಡ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಬಾಗಲಕೋಟೆ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.ಈ ವೇಳೆ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳು ವೈದ್ಯ ಹಾಗೂ ಸಂಸದ ಡಾ. ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳೊಂದಿಗೆ ಇದ್ದರು. ಸಿಎಂ ಅವರೊಂದಿಗೆ ವೈಮಾನಿಕ ಸಮೀಕ್ಷೆಯಲ್ಲಿ ಮಂಕಾಳು ವೈದ್ಯ ಕಾಣಿಸಿಕೊಂಡಿರುವುದು ಉತ್ತರಕನ್ನಡ ಕಾಂಗ್ರೆಸ್‌ನ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸ್ಥಾನ ಕೈತಪ್ಪಿದ ಬಳಿಕವೂ ಮುಖ್ಯಮಂತ್ರಿ ಅವರ ಆಪ್ತ ವಲಯದಲ್ಲಿ ವೈದ್ಯರ ಪ್ರಭಾವ ಕಡಿಮೆಯಾಗಿಲ್ಲ ಎಂಬ ಚರ್ಚೆ ಜೋರಾಗುವಂತೆ ಮಾಡಿದೆ.

ಸಚಿವ ಸ್ಥಾನದಿಂದ ಉಪಸಭಾಧ್ಯಕ್ಷ ಕುರ್ಚಿಯವರೆಗೆ..!

ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಂಕಾಳು ವೈದ್ಯ ಅವರ ಹೆಸರು ಮೊದಲ ಪಟ್ಟಿಯಲ್ಲಿ ಪ್ರಕಟವಾಗಿತ್ತು. ಆದರೆ ಕೆಲವೇ ಕ್ಷಣದಲ್ಲಿ ಬದಲಾವಣೆಗೊಂಡು, ಮಂಕಾಳು ವೈದ್ಯ ಅವರ ಬದಲಿಗೆ ದಾವಣಗೆರೆಯ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ಸೇರ್ಪಡೆಯಾಗಿತ್ತು. ವೈದ್ಯರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ‘ಟೈಪಿಂಗ್ ಮಿಸ್ಟೇಕ್’ ಎಂಬ ಸಮಜಾಯಿಷಿ ನೀಡಿದ್ದರೂ, ಸಚಿವ ಸ್ಥಾನ ತಪ್ಪಿದ ಬಳಿಕ ಸ್ವಪಕ್ಷೀಯ ವಿರೋಧಿಗಳು ಮಂಕಾಳು ವೈದ್ಯ ಅವರ ರಾಜಕೀಯ ಭವಿಷ್ಯವೇ ಮುಗಿದಂತೆ ಎಂದು ಭಾವಿಸಿ ಒಳಗೊಳಗೆ ಸಂಭ್ರಮಿಸಿದ್ದರು ಎಂಬ ರಾಜಕೀಯ ಚರ್ಚೆಯೂ ನಡೆದಿತ್ತು.

ಇನ್ನುಳಿದ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಕಾಳು ವೈದ್ಯ ಅವರನ್ನು ತಮ್ಮದೇ ಕಾರಿನಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ರಾಜಭವನಕ್ಕೆ ತೆರಳಿದ್ದರು. ಆಗಲೂ ಈ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಸಚಿವ ಸ್ಥಾನ ತಪ್ಪಿದ ಬಳಿಕವೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತರಾಗಿರುವ ಮಂಕಾಳು ವೈದ್ಯ ಅವರಿಗೆ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ನೀಡುವ ಮೂಲಕ ಇಬ್ಬರ ನಡುವಿನ ಆಪ್ತ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.

ಸಚಿವ ಸ್ಥಾನದಿಂದ ವಂಚಿತರಾದರೂ ರಾಜಕೀಯವಾಗಿ ಮತ್ತಷ್ಟು ಪ್ರಬಲವಾಗಿ ಮುನ್ನಡೆಯುತ್ತಿರುವ ವೈದ್ಯರ ನಡೆಗೆ ರಾಜಕೀಯ ವಲಯದಲ್ಲಿ ಸಾಕಷ್ಟು  ಚರ್ಚೆಗೆ ನಡೆಯುವಂತೆ ಮಾಡಿದೆ. ವಿಶೇಷವಾಗಿ ಜಿಲ್ಲೆಯೊಳಗಿನ ರಾಜಕೀಯ ಸಮೀಕರಣಗಳು, ಸ್ವಪಕ್ಷೀಯರ ನಡುವಿನ ಭಿನ್ನಾಭಿಪ್ರಾಯ ಹಾಗೂ ಕಾಂಗ್ರೆಸ್ ನಾಯಕತ್ವದೊಂದಿಗೆ ವೈದ್ಯರ ಆಪ್ತ ಸಂಬಂಧದ ಹಿನ್ನೆಲೆಯಲ್ಲಿ ಸಿಎಂ ಜೊತೆಗಿನ ಈ ವೈಮಾನಿಕ ಹಾರಾಟ ಹಲವು ಅರ್ಥಗಳನ್ನು ಹುಟ್ಟುಹಾಕಿದೆ.

ವೈದ್ಯರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ‘ಬೇಸರ’ ಇದ್ದರೂ, ಅದರಿಂದ ಅವರು ರಾಜಕೀಯವಾಗಿ ಹಿಂದೆ ಸರಿಯದೆ ಮತ್ತಷ್ಟು ಗಟ್ಟಿಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಉಪಸಭಾಧ್ಯಕ್ಷ ಸ್ಥಾನ, ಇದೀಗ ಮುಖ್ಯಮಂತ್ರಿಗಳೊಂದಿಗೆ ವೈಮಾನಿಕ ಸಮೀಕ್ಷೆ—ಈ ಬೆಳವಣಿಗೆಗಳು ಮಂಕಾಳು ವೈದ್ಯರ ರಾಜಕೀಯ ಪಯಣಕ್ಕೆ ಹೊಸ ಆಯಾಮ ನೀಡಿರುವುದು ಮಾತ್ರ ಸ್ಪಷ್ಟ.