ಸುದ್ದಿಬಿಂದು ಬ್ಯೂರೋ ವರದಿ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ನಡೆಯುತ್ತಿರುವ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಹೊಸ ತಲೆನೋವು ಎದುರಾಗಿದೆ. ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಗ್ರ್ಯಾಂಡ್ ಪ್ರೀಮಿಯರ್ ನಡೆಸಲು ಸಿದ್ಧತೆ ನಡೆಯುತ್ತಿದ್ದರೂ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ಪರಿಸರ ನಿಯಮಗಳ ವಿಚಾರ ಇದೀಗ ಚರ್ಚೆಗೆ ಬಂದಿದೆ.

ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸೀಸನ್ 13ರ ಕುರಿತು ಮಾಹಿತಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕಾರ್ಯಕ್ರಮದ ಆಯೋಜಕರಿಗೆ ಆತಂಕ ಮೂಡಿಸಿದೆ.

ಜಾಲಿವುಡ್ ಸ್ಟುಡಿಯೋದಲ್ಲಿ ಪರಿಸರ ನಿಯಮಗಳ ಪಾಲನೆ ಕುರಿತಂತೆ ಕೆಲವು ಲೋಪಗಳಿವೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ ವಿಧಿಸಲಾಗಿದ್ದ ದಂಡವನ್ನು ಇನ್ನೂ ಪಾವತಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇದರ ಜೊತೆಗೆ ಅಗತ್ಯ ಪರಿಸರ ನಿಯಮಗಳನ್ನು ಸರಿಪಡಿಸಿಕೊಳ್ಳದಿರುವುದು ಹಾಗೂ ಎಸ್‌ಟಿಪಿ (ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್) ಅಳವಡಿಕೆ ಸೇರಿದಂತೆ ಕೆಲ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಮೇಲೆ ಕ್ಲಿಕ್‌ ಮಾಡಿ ಒಂದು ಲೈಕ್‌ ಮಾಡಿ

ಪರಿಸರ ಸಂಬಂಧಿತ ಲೋಪಗಳನ್ನು ಸರಿಪಡಿಸದೆ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದಿಲ್ಲ ಎಂಬ ಕಠಿಣ ನಿಲುವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಿಗದಿತ ದಿನಾಂಕದಂದೇ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಕಳೆದ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ಪರಿಸರ ಹಾಗೂ ಕಾನೂನು ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಇದೀಗ ಮತ್ತೆ ಅದೇ ರೀತಿಯ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರ್ಮಾಪಕರು ಹಾಗೂ ವಾಹಿನಿ ಸಂಬಂಧಪಟ್ಟ ನಿಯಮಗಳನ್ನು ಪೂರೈಸಿ ಅಗತ್ಯ ಅನುಮತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಸೆಪ್ಟೆಂಬರ್ 6ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಯಾವುದೇ ಅಡ್ಡಿಯಾಗದಂತೆ ಜಾಲಿವುಡ್ ಸ್ಟುಡಿಯೋ ಆಡಳಿತ ಮತ್ತು ಬಿಗ್ ಬಾಸ್ ಆಯೋಜಕರು ಪರಿಸರ ಇಲಾಖೆಯ ನಿಯಮಗಳನ್ನು ಹೇಗೆ ಪಾಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ/̳ ೩೦ ಟನ್‌ಗೂ ಹೆಚ್ಚು ಭಾರದ ವಾಹನಗಳ ಸಂಚಾರ ನಿಷೇಧ : ಜಿಲ್ಲಾಧಿಕಾರಿ