ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಕಾರವಾರ ನಗರದಲ್ಲಿ ಗುರುವಾರ ಆಯೋಜಿಸಿದ್ದ ತಿರಂಗಾ ಯಾತ್ರೆ ಹಾಗೂ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಯಿತು. ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.
ನಗರದ ಮಾಲಾದೇವಿ ಮೈದಾನದಿಂದ ಆರಂಭವಾದ ತಿರಂಗಾ ಯಾತ್ರೆಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದ ಬೈಕ್ಗಳು ಹಾಗೂ ವಾಹನಗಳು ಶಿಸ್ತುಬದ್ಧವಾಗಿ ಸಾಗಿದವು. ಕೋಡಿಭಾಗದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಯಾತ್ರೆ ಬಳಿಕ ಕಾರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾಲಾದೇವಿ ಮೈದಾನದಲ್ಲಿ ಸಮಾರೋಪಗೊಂಡಿತು. ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು.
ಮಹಿಳೆಯರು ಹಾಗೂ ಯುವತಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ದೇಶ ಸದೃಢವಾದರೆ ನಾವೂ ಬಲಿಷ್ಠರಾಗುತ್ತೇವೆ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ, ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿಯಾಗಿ ರಾಜ್ಯದ ವಿವಿಧೆಡೆ ನಡೆದ ತಿರಂಗಾ ಯಾತ್ರೆಗಳಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು. ಪುತ್ತೂರಿನಲ್ಲಿ ಭಾರಿ ಮಳೆಯ ನಡುವೆಯೂ ಜನರು ವಿಚಲಿತರಾಗದೆ ಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪಾಲ್ಗೊಳ್ಳುವಿಕೆಯಲ್ಲಿ ಅದ್ಧೂರಿಯಾಗಿ ತಿರಂಗಾ ಯಾತ್ರೆ ನಡೆದಿದ್ದು, ಕಾರವಾರದಲ್ಲೂ ಯಾತ್ರೆ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು.
ನಮ್ಮ ದೇಶ ಸದೃಢವಾಗಿರಬೇಕು. ದೇಶ ಗಟ್ಟಿಯಾಗಿದ್ದರೆ ನಾವೂ ಬಲಿಷ್ಠರಾಗುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಹೊಂದಿದ್ದು,ಈ ಸಂಕಲ್ಪಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಂತು ದೇಶಸೇವೆ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ಪಕ್ಷದ ಮುಖಂಡರು, ನಗರ ಹಾಗೂ ಗ್ರಾಮೀಣ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ನಾಗರಿಕರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಯೋಗ ಶಿಕ್ಷಕರಾದ ಪ್ರಶಾಂತ ರೇವಣಕರ, ನಾಗೇಶ ಕುರ್ಡೇಕರ, ಸುಭಾಷ್ ಗುನಗಿ, ರವಿರಾಜ ಅಂಕೋಲೆಕರ, ಚಂದ್ರಕಾಂತ ಗೋವಿಂದ ಕೊಠಾರಕರ ಚೆಂಡಿಯಾ, ವಿಷ್ಣು ಸುಬ್ರಾಯ ನಾಯ್ಕ ಅರಗಾ, ಬಾಲಕೃಷ್ಣ ಭೋವಿ ಕಡವಾಡ, ಜ್ಞಾನೇಶ್ವರ ನಾಯ್ಕ, ಲಿಂಗೇಶ್ವರ ತಳೇಕರ, ಶಿಲ್ಪಾ ನಾಯ್ಕ, ವೈಶಾಲಿ ತಾಂಡೇಲ, ಮೋಹನ ಸಾಳುಂಕೆ, ಶಿವಾನಂದ ಎಚ್. ನಾಯ್ಕ, ಸಂತೋಷ ನಾಯ್ಕ, ಅಶೋಕ ನಾಯ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

