ಸುದ್ದಿಬಿಂದು ಬ್ಯೂರೋ ವರದಿ
ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಕುರಿತು ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಅವಶ್ಯಕತೆ ಇರಲಿಲ್ಲವೆನೋ. ಅದಕ್ಕಾಗಿಯೇ ಕೊನೆಯ ಕ್ಷಣದಲ್ಲಿ ನನ್ನ ಹೆಸರನ್ನು ಕೈಬಿಟ್ಟಿರಬಹುದು. ಯಾವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡರು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾರಿಗೆ ಅನ್ಯಾಯವಾಗಿದೆ, ಯಾವ ಭಾಗಕ್ಕೆ ಅನ್ಯಾಯವಾಗಿದೆ ಎಂಬುದನ್ನು ನಾವು ಹೇಳಿದರೆ ಅದು ಕೇವಲ ಮಾತಾಗಿ ಉಳಿಯುತ್ತದೆ. ಅದರ ಬಗ್ಗೆ ಅಂತಿಮ ತೀರ್ಮಾನವನ್ನು ಜನರೇ ಮಾಡುತ್ತಾರೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ತಾವು ಸಚಿವರಾಗಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿರುವುದಾಗಿ ಹೇಳಿದ ಮಂಕಾಳ ವೈದ್ಯ, “ಮಂತ್ರಿಯಾಗಿ ಮೂರು ವರ್ಷ ಉತ್ತಮ ಕೆಲಸ ಮಾಡಿದ್ದೇನೆ. ಯಾವುದೇ ಕೆಟ್ಟ ಹೆಸರು ತೆಗೆದುಕೊಂಡಿಲ್ಲ. ಅಷ್ಟೇ ನನಗೆ ಸಾಕು”.ಸಚಿವ ಸ್ಥಾನ ಕೈತಪ್ಪಿದ ದಿನದ ಬೆಳವಣಿಗೆಯನ್ನು ವಿವರಿಸಿದ ಅವರು, “ಆ ದಿನ ಬೆಳಿಗ್ಗೆ ಸುಮಾರು 10 ಗಂಟೆಗೆ ಮುಖ್ಯಮಂತ್ರಿ ಅವರು ಕರೆ ಮಾಡಿ ‘ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ, ತಿಳಿಸಿದ್ದರು. ಆದರೆ 11 ಗಂಟೆಗೆ ಮತ್ತೆ ಕರೆ ಮಾಡಿ, ‘ನಿಮ್ಮ ಹೆಸರನ್ನು ಕೈಬಿಟ್ಟಿದ್ದೇವೆ. ಮಲ್ಲಣ್ಣ ಅವರಿಗೆ ಅವಕಾಶ ನೀಡಿದ್ದೇವೆ’ ಎಂದು ಹೇಳಿದರು. ನಂತರ ಏನೇನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಮಂಕಾಳ ವೈದ್ಯ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

