ಸುದ್ದಿಬಿಂದು ಬ್ಯೂರೋ‌ ವರದಿ
ಅಂಕೋಲಾ: ತುಮಕೂರು ಸಮೀಪ ಕಾರಿನೊಳಗೆ ನಾಡಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನಾಗೇಂದ್ರ ಗೌಡ ಪ್ರಕರಣದ ತನಿಖೆ ವೇಳೆ ಅಂಕೋಲಾ ಪೊಲೀಸರಿಗೆ ಮತ್ತೊಂದು ಮಹತ್ವದ ಸುಳಿವು ದೊರೆತಿದೆ. ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ಸಂಗ್ರಹಿಸಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ಮಾಹಿತಿ ಮೇರೆಗೆ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಮೂರು ಕಚ್ಚಾ ನಾಡಬಾಂಬ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಹೊನ್ನಳ್ಳಿಯ ನಾರಾಯಣ ಗೌಡ, ನಾಗರಾಜ ಗೌಡ ಹಾಗೂ ಶಿರಗುಂಜಿಯ ಸಂದೀಪ್ ಗೌಡ ಎಂದು ಗುರುತಿಸಲಾಗಿದೆ. ಗಸ್ತು ವೇಳೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಎಎಸ್‌ಸಿ (ASC) ಮತ್ತು ಬಿಡಿಡಿಎಸ್ (BDDS) ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಮೀನುಗಾರಿಕೆಗೆ ಬಳಸುವ ಉದ್ದೇಶದಿಂದ ನಾಡಬಾಂಬ್‌ಗಳನ್ನು ಇಟ್ಟುಕೊಂಡಿದ್ದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾಗೇಂದ್ರ ಗೌಡ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಘಟನೆ ಬಳಿಕ ಆತಂಕಗೊಂಡು ತಮ್ಮ ಬಳಿ ಇದ್ದ ಸ್ಫೋಟಕಗಳನ್ನು ಅರಣ್ಯದಲ್ಲಿ ಅಡಗಿಸಿಟ್ಟಿದ್ದಾಗಿ ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಮಾಹಿತಿ ಮೇರೆಗೆ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದ ಪೊಲೀಸರು ಮೂರು ಕಚ್ಚಾ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಸುರಕ್ಷತಾ ಕ್ರಮವಾಗಿ ಸ್ಫೋಟಕ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಸ್ಫೋಟಕಗಳನ್ನು ಸಂದೀಪ್ ಗೌಡ ಪೂರೈಸಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ Explosive Substances Act, 1908ರ ಕಲಂ 4 ಮತ್ತು 5 ಹಾಗೂ ಬಿಎನ್‌ಎಸ್–2023ರ ಕಲಂ 288ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ/ಸಿದ್ದಾಪುರ ಮೂಲದ ಗೋಪಾಲರಾವ್ ಸೇರಿ ಮೂವರಿಗೆ ಅಯೋಧ್ಯೆ ತೊರೆಯಲು ಗಡುವು