ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ಹೆಗಡೆ ಕ್ರಾಸ್ ಸಮೀಪದ ಪುರಭವನದಲ್ಲಿ ಜೂನ್ 17ರಿಂದ 21ರವರೆಗೆ ನಡೆಯಲಿರುವ ಹಲಸು, ಮಾವು ಹಾಗೂ ಸ್ವದೇಶಿ ವಸ್ತುಗಳ ಮೇಳಕ್ಕೆ ಬುಧವಾರ ಅದ್ಧೂರಿಯಾಗಿ ಚಾಲನೆ ದೊರೆಯಿತು. ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ರೋಟರಿ ಕ್ಲಬ್ ಕುಮಟಾ ಹಾಗೂ ಬೆನಕ ಈವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಐದು ದಿನಗಳ ಈ ಮೇಳವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿದರು.

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸೂರಜ್ ನಾಯ್ಕ ಸೋನಿ, ಸ್ಥಳೀಯವಾಗಿ ತಯಾರಾಗುವ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ಹಲಸಿನ ಹಣ್ಣಿನಿಂದ ತಯಾರಿಸಬಹುದಾದ ವೈವಿಧ್ಯಮಯ ಆಹಾರ ಪದಾರ್ಥಗಳು ಆಶ್ಚರ್ಯ ಮೂಡಿಸುವಂತಿದ್ದು, ಇಂತಹ ಮೇಳಗಳು ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುತ್ತವೆ ಎಂದು ಹೇಳಿದರು.

ಈ ಹಲಸು, ಮಾವು ಹಾಗೂ ಸ್ವದೇಶಿ ವಸ್ತುಗಳ ಮೇಳದಲ್ಲಿ ಹಲಸಿನ ಜಿಲೇಬಿ, ಹೋಳಿಗೆ, ಬಿರಿಯಾನಿ, ಕಬಾಬ್, ಮಂಚೂರಿಯನ್, ಚಿಪ್ಸ್, ಹಪ್ಪಳ, ಜಾಮ್ ಹಾಗೂ ಉಪ್ಪಿನಕಾಯಿ ಸೇರಿದಂತೆ ಹಲಸಿನ ಹಣ್ಣಿನಿಂದ ತಯಾರಿಸಲಾದ ವಿವಿಧ ವಿಶೇಷ ತಿನಿಸುಗಳು ಲಭ್ಯವಿವೆ. ಜೊತೆಗೆ ನೈಸರ್ಗಿಕ ಹಣ್ಣಿನ ಐಸ್‌ಕ್ರೀಮ್‌, ಮಾವಿನ ವಿವಿಧ ಉತ್ಪನ್ನಗಳು, ಪೇರಳೆ ಉತ್ಪನ್ನಗಳು, ರೋಸ್ ಪೆಟಲ್ ಗುಲ್ಕಂದ್, ವಿವಿಧ ಬಗೆಯ ಉಪ್ಪಿನಕಾಯಿಗಳು, ರಾಮನಗರದ ವಿಶೇಷ ಮಾವಿನ ಹಣ್ಣುಗಳು, ಆಯುರ್ವೇದ ಔಷಧಿಗಳು, ಖಾದಿ ಉತ್ಪನ್ನಗಳು, ಇಳಕಲ್ ಹಾಗೂ ಮೈಸೂರು ಸಿಲ್ಕ್ ಸೀರೆಗಳು, ಮಕ್ಕಳ ಉಡುಪುಗಳು, ಸದಭಿರುಚಿಯ ಪುಸ್ತಕಗಳು ಮತ್ತು ಚೆನ್ನಪಟ್ಟಣದ ಗೊಂಬೆಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯುತ್ತಿದೆ.

ಮೇಳದ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅನೇಕರು ವಿವಿಧ ತಿನಿಸುಗಳ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು. ವಿವಿಧ ಜಾತಿಯ ಮಾವಿನ ತಳಿಗಳು, ಹಲಸು, ಹೂವಿನ ಗಿಡಗಳು, ತರಕಾರಿ ಬೀಜಗಳು ಹಾಗೂ ವಿವಿಧ ತಳಿಯ ಕಸಿ ಗಿಡಗಳ ಮಾರಾಟವೂ ನಡೆಯುತ್ತಿದೆ. ರೈತರಿಗೆ ತೋಟಗಾರಿಕೆ ಬೆಳೆಗಳ ನಿರ್ವಹಣೆ ಹಾಗೂ ಸಾವಯವ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬೆನಕ ಈವೆಂಟ್ಸ್ ಸಂಘಟಕ ಗಣೇಶ ಶೆಟ್ಟಿ, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಹಲಸು, ಮಾವು ಹಾಗೂ ಸ್ವದೇಶಿ ವಸ್ತುಗಳ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೋಕರ್ಣ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯ ಸುಜಯ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ/ರೌಡಿಶೀಟರ್ ಹಲ್ಲೆ ವಿಷಯ: ಅಮಾನತ್ತಾಗಿದ್ದು ಎಸ್ಸೈ… ಕರ್ಮ ಕರ್ಮ…!?