ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಶಿರಸಿ-ಸಿದ್ದಾಪುರ ತಾಲೂಕಿನ ಗ್ರಾಮಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಾರಾಯಿ ಮಾರಾಟ ಹಾಗೂ ಗಾಂಜಾ ಮಾರಾಟ ಮತ್ತು ಸೇವನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರ ವತಿಯಿಂದ ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಬ್ರಹ್ಮರ್ಷಿ ನಾರಾಯಣ ಗುರುಗಳ ಸಂದೇಶವನ್ನು ಸ್ಮರಿಸಿ, “ಸಾರಾಯಿ ವಿಷ; ಅದನ್ನು ಮಾರಬೇಡ, ಮಾಡಬೇಡ, ಕುಡಿಯಬೇಡ” ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಆಕ್ರೋಶ
ಗ್ರಾಮೀಣ ಭಾಗಗಳಲ್ಲಿ ಅಕ್ರಮ ಸಾರಾಯಿ ಸುಲಭವಾಗಿ ದೊರೆಯುತ್ತಿರುವುದರಿಂದ ದಿನನಿತ್ಯ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಆರೋಗ್ಯ ಹಾಗೂ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಕಡಿಮೆ ಗುಣಮಟ್ಟದ ಅಕ್ರಮ ಸಾರಾಯಿ ಸೇವನೆಯಿಂದ ಕಿಡ್ನಿ, ಲಿವರ್ ಸೇರಿದಂತೆ ದೇಹದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗುತ್ತಿದ್ದು, ಹಲವರು ಜೀವವನ್ನೇ ಕಳೆದುಕೊಂಡಿರುವ ಮಾಹಿತಿ ಇದೆ ಎಂದು ಅವರು ಹೇಳಿದರು. ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಲಭ್ಯವಾಗದಿದ್ದರೆ ಜನರು ಅಪರೂಪಕ್ಕೆ ಮಾತ್ರ ಮದ್ಯ ಸೇವಿಸುತ್ತಿದ್ದರು. ಆದರೆ ಈಗ ಹಳ್ಳಿಯಲ್ಲೇ ಸುಲಭವಾಗಿ ದೊರೆಯುತ್ತಿರುವುದರಿಂದ ದುಶ್ಚಟ ಹೆಚ್ಚುತ್ತಿದೆ. ಈ ಅಕ್ರಮ ದಂಧೆ ನಡೆಸುವವರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಾಂಜಾ ಜಾಲದಿಂದ ವಿದ್ಯಾರ್ಥಿಗಳು, ಯುವಕರು ಬಲಿಯಾಗುತ್ತಿದ್ದಾರೆ.
ಗಾಂಜಾ ಮಾರಾಟ ಮತ್ತು ಸೇವನೆ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ದುಶ್ಚಟದತ್ತ ತಳ್ಳುತ್ತಿದ್ದು, ಶಿಕ್ಷಣ ಮತ್ತು ಭವಿಷ್ಯ ಹಾಳಾಗುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಕಳವಳ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕರು ಈ ಬಗ್ಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಮಾಡಿರುವ ಅವರು, “ಇನ್ನೊಂದು ತಿಂಗಳೊಳಗೆ ಅಕ್ರಮ ಸಾರಾಯಿ, ಡ್ರಗ್ಸ್ ಹಾಗೂ ಗಾಂಜಾ ದಂಧೆಯನ್ನು ನಿಯಂತ್ರಿಸದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡರ ಆರೋಪ
ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಅಕ್ರಮ ಸಾರಾಯಿ ಮಾರಾಟಗಾರರು ಕಾರು ಹಾಗೂ ಖಾಸಗಿ ವಾಹನಗಳಲ್ಲಿ ರಾಜಾರೋಷವಾಗಿ ಮದ್ಯ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಹಾಂತೇಶ ಹಾದಿಮನಿ ಮಾತನಾಡಿ, ಗಾಂಜಾ ಚಾಕೊಲೇಟ್ ರೂಪದಲ್ಲಿಯೂ ವಿದ್ಯಾರ್ಥಿಗಳ ಕೈ ಸೇರುತ್ತಿರುವ ಮಾಹಿತಿ ಲಭ್ಯವಾಗಿದ್ದು, ನಗರದಲ್ಲಿ ಕೆಲವು ಪ್ರದೇಶಗಳನ್ನು ಮಾರಾಟಗಾರರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ ಎಂಬ ಸಾರ್ವಜನಿಕ ಆರೋಪಗಳಿವೆ. ರಾಜಕೀಯ ಒತ್ತಡವಿಲ್ಲದೆ ಪೊಲೀಸರು ಈ ಜಾಲವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾಂತ್ವಾನ ಮಹಿಳಾ ವೇದಿಕೆಯ ಜ್ಯೋತಿ ಭಟ್, ಸುರೇಶ್ ನಾಯ್ಕ್
ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಮಾರುತಿ ನಾಯ್ಕ್ ಹೊಸೂರು,
ಗಣೇಶ ಕ್ಷತ್ರಿಯ ಮಾತನಾಡಿದರು,
ಪ್ರತಿಭಟನೆಯಲ್ಲಿ ಹಲವರು ಭಾಗಿ
ಪ್ರತಿಭಟನೆಯಲ್ಲಿ ವಿ.ಎಂ. ಭಟ್, ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ್, ಅನಸೂಯ ಹೆಗಡೆ, ಯುವರಾಜ ಗೌಡ ಸಂತೊಳ್ಳಿ, ಮಂಜುನಾಥ ನಾಯ್ಕ್, ರಾಘವೇಂದ್ರ ನಾಯ್ಕ್, ಶಂಕರ್ ಹೆಗಡೆ, ಕೃಷ್ಣಮೂರ್ತಿ ಐಸೂರ್, ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ.ಎಸ್. ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಿರಸಿ ತಾಲೂಕು ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಕುಪ್ಪಳ್ಳಿ ಮನವಿ ವಾಚಿಸಿದರು.
ಇದನ್ನೂ ಓದಿ/ಹೊನ್ನಾವರ ಪ್ರವಾಸೋದ್ಯಮಕ್ಕೆ ಆನಂದ್ ಮಹೀಂದ್ರಾ ಮೆಚ್ಚುಗೆ: ರಾಷ್ಟ್ರದ ಗಮನ ಸೆಳೆದ ಶರಾವತಿ ಹಿನ್ನೀರು

