ಸುದ್ದಿಬಿಂದು ಬ್ಯೂರೋ ವರದಿ
ಬೆಂಗಖೂರು: ರಾಜ್ಯದಲ್ಲಿ ವೈದ್ಯರ ಖಾಯಂ ನೇಮಕಾತಿ ಕುರಿತು ಆರೋಗ್ಯ ಸಚಿವರು ಹಾಗೂ ಸರ್ಕಾರ ನಿರಂತರವಾಗಿ ಗಮನ ಹರಿಸುತ್ತಿರುವ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ದಿನಗೂಲಿ ಮತ್ತು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಆಸ್ಪತ್ರೆಗಳ ಸುಗಮ ನಿರ್ವಹಣೆಯಲ್ಲಿ ವೈದ್ಯರಷ್ಟೇ ಶುಶ್ರೂಷಕಿಯರ ಪಾತ್ರವೂ ಮಹತ್ವದ್ದಾಗಿದೆ. ರೋಗಿಗಳ ಆರೈಕೆ, ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ, ಔಷಧ ವಿತರಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಶುಶ್ರೂಷಕಿಯರು ನಿರ್ವಹಿಸುತ್ತಾರೆ. ಕೆಲವೊಮ್ಮೆ ವೈದ್ಯರು ಲಭ್ಯವಿಲ್ಲದ ಸಂದರ್ಭಗಳಲ್ಲಿಯೂ ರೋಗಿಗಳಿಗೆ ನೆರವಾಗಿ ಜೀವ ಉಳಿಸುವ ಕಾರ್ಯವನ್ನು ಅವರು ಮಾಡುತ್ತಾರೆಂದು ಅನೇಕ ನುರಿತ ವೈದ್ಯರು ಸಹ ಅಭಿಪ್ರಾಯ ಪಡುತ್ತಿದ್ದಾರೆ.
ಆದರೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಅನೇಕ ಶುಶ್ರೂಷಕಿಯರು ಇನ್ನೂ ದಿನಗೂಲಿ ಅಥವಾ ಗುತ್ತಿಗೆ ಆಧಾರದ ಉದ್ಯೋಗದಲ್ಲೇ ಮುಂದುವರಿದಿದ್ದಾರೆ.ಕಡಿಮೆ ವೇತನದಲ್ಲಿ ಕೆಲಸ ನಿರ್ವಹಿಸುತ್ತಿರುವ ಅವರು, ಉದ್ಯೋಗ ಭದ್ರತೆ ಹಾಗೂ ಖಾಯಂ ನೇಮಕಾತಿಗಾಗಿ ವರ್ಷಗಳಿಂದ ನಿರೀಕ್ಷಿಸುತ್ತಿದ್ದಾರೆ.
“ವೈದ್ಯರ ನೇಮಕಾತಿಗೆ ಸರ್ಕಾರ ಆದ್ಯತೆ ನೀಡುವುದು ಸ್ವಾಗತಾರ್ಹ. ಆದರೆ ಆರೋಗ್ಯ ವ್ಯವಸ್ಥೆಯ ಮತ್ತೊಂದು ಪ್ರಮುಖ ಆಧಾರಸ್ತಂಭವಾಗಿರುವ ಶುಶ್ರೂಷಕಿಯರಿಗೂ ಸಮಾನ ಮಹತ್ವ ನೀಡಬೇಕು. ಅವರ ಸೇವೆಯನ್ನು ಗುರುತಿಸಿ ಖಾಯಂ ನೇಮಕಾತಿ ಹಾಗೂ ಸೂಕ್ತ ವೇತನ ಸೌಲಭ್ಯ ಕಲ್ಪಿಸಬೇಕು” ಎಂದು ಹಲವು ಶುಶ್ರೂಷಕಿಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವ ಶುಶ್ರೂಷಕಿಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ, ಅವರ ಸೇವೆಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ವಿವಿಧ ವಲಯಗಳಿಂದ ಕೇಳಿಬರುತ್ತಿದೆ.
ಇದನ್ನೂ ಓದಿ/ಸಾಮಾಜಿಕ ಕಾಳಜಿಗೆ ಸಾಕ್ಷಿಯಾದ ತಹಶೀಲ್ದಾರ: ಐದು ಸರ್ಕಾರಿ ಶಾಲೆಗಳಿಗೆ ವಾಟರ್ ಪ್ಯೂರಿಫೈಯರ್

