ಸುದ್ದಿಬಿಂದು ಬ್ಯೂರೋ
ಹಳಿಯಾಳ: ಜೀವ ಬೆದರಿಕೆ ಹಾಕಿ ಬೈಕ್ ಪಡೆದುಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿ ಆಪಾದಿತನನ್ನು ಹಳಿಯಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿ ರಾಕೇಶ ದಿನಕರ ವಾಲೇಕರ ಎಂಬಾತನು ಕಾನ್ವೆಂಟ್ ರೋಡ್ ನಿವಾಸಿ ರಾಹುಲ್ ಜಯವಂತ ವಾಣಿ ಈತನಿಗೆ “ಹಣವನ್ನು ಡಬಲ್ ಮಾಡಿಕೊಡುತ್ತೇನೆ, 1 ಲಕ್ಷ ರೂ. ಕೊಡು” ಎಂದು ಕೇಳಿದ್ದಾನೆ ಎನ್ನಲಾಗಿದೆ. ಹಣ ಇಲ್ಲ ಎಂದು ತಿಳಿಸಿದಾಗ “ಹಣ ಅಥವಾ ಬೈಕ್ ಕೊಡು, ಇಲ್ಲದಿದ್ದರೆ ಸಾಯಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭಯಗೊಂಡ ರಾಹುಲ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ನಂ. ಕೆಎ-65/ಜೆ-1393, ಅಂದಾಜು 1.50 ಲಕ್ಷ ರೂ. ಮೌಲ್ಯದ ವಾಹನವನ್ನು ಆರೋಪಿತನಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣವು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ದಸ್ತಗಿರಿ ವಾರಂಟ್ ಜಾರಿಗೊಳಿಸಲಾಗಿತ್ತು.

ವಿಶೇಷ ಪತ್ತೆ ತಂಡ ರಚಿಸಿಕೊಂಡ ಹಳಿಯಾಳ ಪೊಲೀಸರು ಮೇ 16ರಂದು ಆರೋಪಿತನು ಗೋವಾದ ಪೊಂಡಾದಿಂದ ಹಳಿಯಾಳಕ್ಕೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದರು.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್.ಎನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಹಾಗೂ ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಸಿಪಿಐ ಜಯಪಾಲ್ ಪಾಟೀಲ್ ಅವರ ಮಾರ್ಗದರ್ಶನವಿತ್ತು. ಪಿಎಸ್ಐ ಬಸವರಾಜ ಮಬನೂರ ಹಾಗೂ ಪಿಎಸ್ಐ ಕೃಷ್ಣಾ ಅರಕೇರಿ ನೇತೃತ್ವದ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿಗಳಾದ ಮಹಮ್ಮದ್ ಹನೀಪ್ ಮುಲ್ಲಾ, ಸಂತೋಷ ಡಿ. ಉರ್ಮಿ ಮತ್ತು ರಾಘವೇಂದ್ರ ಕೆರವಾಡ ಭಾಗವಹಿಸಿದ್ದರು.

ಇದನ್ನೂ ಓದಿ/ಸಿಡಿಲಿನ ಸದ್ದು ಕೇಳಿ ಹೃದಯಾಘಾತ; ಶಿಕ್ಷಕ ಸಾವು