ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಮಹಿಳೆಯರು ಸ್ವಾವಲಂಬಿಯಾಗಲು ರೋಟರಿ ಸಂಸ್ಥೆ ಕೈಜೋಡಿಸಿರುವುದು ಅಭಿನಂದನೀಯ ಕಾರ್ಯವಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಕುಟುಂಬಕ್ಕೂ ಆರ್ಥಿಕ ಚೈತನ್ಯ ತುಂಬಲಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಪೂಗ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿರಸಿ ಹಾಗೂ ರೋಟರಿ ಸೇವಾ ಪ್ರತಿಷ್ಠಾನ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ 100ಕ್ಕೂ ಅಧಿಕ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಶಿರಸಿ ರೋಟರಿ ಕ್ಲಬ್ ರಾಜ್ಯದಲ್ಲೇ ಮಾದರಿಯಾಗಿದ್ದು, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಪರಿವರ್ತನೆಯ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸೇವೆ ಸಲ್ಲಿಸುತ್ತಿದೆ. ಇಂತಹ ಕಾರ್ಯಗಳನ್ನು ಇತರೆ ಸಂಘ ಸಂಸ್ಥೆಗಳೂ ಸಹ ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಜಾರಿಗೊಳಿಸಿದ “ಶಿಕ್ಷಣ ಸಿರಿ” ಯೋಜನೆ ಅತ್ಯುತ್ತಮ ಕಾರ್ಯವಾಗಿದೆ. ರೋಟರಿ ನೆರವಿನಿಂದ ನಡೆದ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ ಉತ್ತಮಗೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ನಾಯ್ಕ ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಅಂಗನವಾಡಿ ಮಕ್ಕಳಿಗೆ ಆಸನ ವ್ಯವಸ್ಥೆ ಕಲ್ಪಿಸಲು ಕುರ್ಚಿ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಈಗ ವಿತರಿಸಲಾದ 100ಕ್ಕೂ ಅಧಿಕ ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಯನ್ನು “ಆಲೆಮನೆ ಉತ್ಸವ”ದ ಉಳಿದ ಆದಾಯ ಹಾಗೂ ರೋಟರಿ ಸದಸ್ಯರ ಸಹಕಾರದಿಂದ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಹೊಲಿಗೆ ತರಬೇತಿದಾರರಾದ ಶ್ರೀಕಲಾ ನಾಯ್ಕ ಹೊಲಿಗೆ ಯಂತ್ರಗಳ ಬಳಕೆ ಹಾಗೂ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧಿಕಾರಿ ಶಿಲ್ಪ ನಾಯ್ಕ್ ಹಾಗೂ ಶ್ರೀಕಲಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಾ. ದಿನೇಶ ಹೆಗಡೆ, ಸಂಧ್ಯಾ ನಾಯ್ಕ, ಸತೀಶ ಭಟ್ಟ ನಾಡಗುಳಿ, ವಿನಾಯಕ ಶೇಟ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರು,ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಡಾ. ಸುಮನ್ ಹೆಗಡೆ ಪ್ರಾರ್ಥಿಸಿದರು. ಪ್ರೊ. ಕೆ.ಎನ್. ಹೊಸ್ಮನಿ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕಾರ್ಯದರ್ಶಿ ಹರೀಶ್ ಹೆಗಡೆ ವಂದಿಸಿದರು.



