ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಸಾರ್ವಜನಿಕರ ಎದುರು ಅವಮಾನಕಾರಿ ವರ್ತನೆ ತೋರಿದ್ದು ಹಾಗೂ ಅಕ್ರಮವಾಗಿ ದಂಡ ವಸೂಲಿ ಮಾಡಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮುಖಂಡ ಮಂಜುನಾಥ ಎಲ್ ನಾಯ್ಕ ಆಗ್ರಹಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ಡಿಐಜಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕುಮಟಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರೇಶ್ವರದ ಅಕ್ಷಯ ನಾಯ್ಕ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗಿಬ್ ಸರ್ಕಲ್ ಬಳಿ ತಡೆದ ಪಿಎಸ್ಐ ಖಾದರ್ ಭಾಷಾ ಸಾರ್ವಜನಿಕರ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಕಾನೂನು ಪ್ರಕಾರ ದಂಡ ವಿಧಿಸುವ ಅಧಿಕಾರ ಪೊಲೀಸರಿಗೆ ಇದ್ದರೂ, ಗೌರವಯುತವಾಗಿ ವರ್ತಿಸುವ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಈಗಾಗಲೇ ಬಾಡಿ ಕ್ಯಾಮರಾ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದು, ವಾಹನ ತಪಾಸಣೆ ವೇಳೆ ಅವುಗಳನ್ನು ಕಡ್ಡಾಯವಾಗಿ ಬಳಸಿದರೆ ಇಂತಹ ವಿವಾದಗಳಿಗೆ ಅವಕಾಶ ಇರುವುದಿಲ್ಲ ಎಂದರು. ಬೈಕ್ ಸವಾರರನ್ನು ಹೆದ್ದಾರಿಯಲ್ಲಿ ಬಲವಂತವಾಗಿ ತಡೆದು ಎಳೆಯುವ ರೀತಿಯ ಕ್ರಮ ಅಪಘಾತಕ್ಕೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಅಕ್ಷಯ ನಾಯ್ಕರು ತಪ್ಪು ಮಾಡಿದ್ದರೆ ಅದರ ಸ್ಪಷ್ಟ ಸಾಕ್ಷ್ಯ ತೋರಿಸಿ ಕಾನೂನುಬದ್ಧ ದಂಡ ವಿಧಿಸಲಿ. ಆದರೆ ಸಾರ್ವಜನಿಕರ ಎದುರು ಅವಾಚ್ಯವಾಗಿ ಮಾತನಾಡುವುದು, ಮೊಬೈಲ್ ಹಾಗೂ ಕೀ ಕಸಿಯುವ ವರ್ತನೆ ಸರಿಯಲ್ಲ. ಮೊಬೈಲ್ ಬಳಸಿದ ಆರೋಪಕ್ಕೆ ಸಾಕ್ಷ್ಯ ಕೇಳಿದ್ದರೂ ಇದುವರೆಗೆ ನೀಡಿಲ್ಲ. ಸಾಕ್ಷ್ಯ ಸಮೇತ ಆರೋಪ ಸಾಬೀತಾದರೆ ನಾವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇವೆ” ಎಂದು ಮಂಜುನಾಥ ನಾಯ್ಕ ಹೇಳಿದರು.
ಅಕ್ಷಯ ನಾಯ್ಕ ಮಾತನಾಡಿ, ಮೇ 8ರಂದು ಸಂಜೆ ಸುಮಾರು 6-50ರ ವೇಳೆಗೆ ಹೆಗಡೆ ಕ್ರಾಸ್ನಿಂದ ಧಾರೇಶ್ವರ ಕಡೆಗೆ ತೆರಳುತ್ತಿದ್ದ ವೇಳೆ ಗಿಬ್ ಸರ್ಕಲ್ ಬಳಿ ಪೊಲೀಸರು ವಾಹನ ತಡೆದಿದ್ದ,. ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸುವುದು ಒಪ್ಪಬಹುದಾದ ವಿಷಯವಾದರೂ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ದಾಗಿ ಸುಳ್ಳು ಆರೋಪ ಮಾಡಲಾಗಿದೆ ಎಂದು ದೂರಿದ್ದಾರೆ.
ಒಟ್ಟು 3 ಸಾವಿರ ರೂ. ದಂಡ ವಿಧಿಸಿದ್ದು, ಅದರಲ್ಲಿ 1ಸಾವಿರ ರೂ. ನಗದು ರೂಪದಲ್ಲಿ ಪಡೆದು ಯಾವುದೇ ರಸೀದಿ ನೀಡಿಲ್ಲ. ಉಳಿದ 2ಸಾವಿರ ರೂ.ಗಳನ್ನು ಫೋನ್ಪೇ ಮೂಲಕ ಪಡೆದು ಕೇವಲ ಅದಕ್ಕಷ್ಟೇ ರಸೀದಿ ನೀಡಿದ್ದಾರೆ ಎಂದು ಆರೋಪಿಸಿದರು. ಇದು ಅಕ್ರಮ ವಸೂಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಹರೀಶ್ ಶೇಟ್, ಕಾಂಗ್ರೆಸ್ ಮುಖಂಡ ಗಜು ನಾಯ್ಕ ಅಳ್ವೆಕೋಡಿ, ಸಂದೇಶ ಶೆಟ್ಟಿ, ಸುರೇಶ ಹರಿಕಂತ್ರ, ಈಶ್ವರ ಮುಕ್ರಿ, ಗೋಪಾಲ ನಾಯ್ಕ ಮೂರೂರು ಸೇರಿದಂತೆ ಹಲವರು ಉಪಸ್ಥಿತರಿದ್ದಹತ್ಯೆ
ಇದನ್ನೂ ಓದಿ/Murder /ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

